ಹಾಸನ: ಲೋಕಸಭಾ ಚುನಾವಣೆಗೆ (Lok Sabha Election) ಇನ್ನು 19 ದಿನಗಳು ಮಾತ್ರ ಉಳಿದಿದ್ದು, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಹಾಗೂ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಆದರೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ (Preetham Gowda) ಮಾತ್ರ ಪ್ರಜ್ವಲ್ ರೇವಣ್ಣ ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಸನದಲ್ಲಿ ನಡೆದ ಎರಡು ಸಮನ್ವಯ ಸಭೆ ಹಾಗೂ ನಾಮಪತ್ರ ಸಲ್ಲಿಕೆಗೂ ಪ್ರೀತಂಗೌಡ ಗೈರಾಗಿದ್ದು, ಜೆಡಿಎಸ್ ಹಾಗೂ ಬಿಜೆಪಿ ನಾಯಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ದೂರು ನೀಡಿದ್ದಾರೆ. ನಾಳೆ (ಏ.7) ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಮೈಸೂರಿನಲ್ಲಿ (Mysuru) ಮುಖಾಮುಖಿಯಾಗಲಿದ್ದು, ಎಲ್ಲದಕ್ಕೂ ತೆರೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿಗೆ ಆರಂಭದಲ್ಲೇ ವಿರೋಧ ವ್ಯಕ್ತಪಡಿಸಿದ್ದ ಮಾಜಿ ಶಾಸಕ ಪ್ರೀತಂಗೌಡ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಿಲ್ಕುಲ್ ಬೇಡ ಎಂದು ಪಟ್ಟು ಹಿಡಿದಿದ್ದರು. ಆದರೆ ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿಯಾದರೂ ಪ್ರೀತಂಗೌಡ ಮಾತ್ರ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕುಟುಂಬದ ಮೇಲಿನ ರಾಜಕೀಯ ದ್ವೇಷವನ್ನು ಮರೆತಿಲ್ಲ. ಇದಕ್ಕೆ ಹಲವು ಕಾರಣಗಳಿವೆ. ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೆ ಪ್ರೀತಂಗೌಡ ಬಿಜೆಪಿಯಿಂದ ಸ್ಪರ್ಧಿಸಿ 2018ರಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಈ ವೇಳೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದು, ಹೆಚ್.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಈ ವೇಳೆ ಏಕೈಕ ಬಿಜೆಪಿ ಶಾಸಕರಾಗಿದ್ದ ಪ್ರೀತಂಗೌಡರನ್ನು ಹೆಚ್.ಡಿ.ರೇವಣ್ಣ ಆಕಸ್ಮಿಕ ಶಾಸಕ ಎಂದು ಪದೇ ಪದೇ ಹೀಯಾಳಿಸುತ್ತಿದ್ದರು. ಆದರೆ ಪ್ರೀತಂಗೌಡ ಬೆಂಬಲಕ್ಕೆ ಯಾವ ಬಿಜೆಪಿ ನಾಯಕರೂ ನಿಲ್ಲಲಿಲ್ಲ. ಇದನ್ನೂ ಓದಿ: ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಕೊಲ್ಲುತ್ತೇವೆಂದ ರಕ್ಷಣಾ ಸಚಿವರ ಹೇಳಿಕೆಗೆ ಪಾಕ್ ಖಂಡನೆ
ಅನಂತರದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ಹತ್ತಿರವಾದ ಪ್ರೀತಂಗೌಡ ಆಪರೇಷನ್ ಕಮಲ ಮಾಡುವಾಗ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಗ್ಗೆ ಲಘುವಾಗಿ ಮಾತನಾಡಿದ್ದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಪ್ರೀತಂಗೌಡ ಮನೆಗೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಯಡಿಯೂರಪ್ಪ ಆದಿಯಾಗಿ ಇಡಿ ಬಿಜೆಪಿ ನಾಯಕರ ದಂಡೆ ಪ್ರೀತಂಗೌಡ ಬೆಂಬಲಕ್ಕೆ ನಿಂತಿತ್ತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು, ಪ್ರೀತಂಗೌಡ ವರ್ಚಸ್ಸು ಬದಲಾಯಿತು. ರೇವಣ್ಣ ತಂದಿದ್ದ ಬಹುಕೋಟಿ ವೆಚ್ಚದ ಕಾಮಗಾರಿಗಳನ್ನು ಬದಲಾಯಿಸಿದರು. ಹಾಸನ ವಿಮಾನ ನಿಲ್ದಾಣ, ಚನ್ನಪಟ್ಟಣ ಕೆರೆ ಅಭಿವೃದ್ಧಿ, ಐಐಟಿಗೆ ಮೀಸಲಿಟ್ಟಿದ್ದ ಜಾಗ, ಟ್ರಕ್ ಟರ್ಮಿನಲ್ ಸೇರಿದಂತೆ ಹಲವು ಕಾಮಗಾರಿಗಳ ವಿಚಾರದಲ್ಲಿ ಪ್ರೀತಂಗೌಡ ಹಾಗೂ ಹೆಚ್.ಡಿ.ರೇವಣ್ಣ ಕುಟುಂಬದ ನಡುವೆ ಮಾತಿನ ಯುದ್ಧ ನಡೆದು ಹೋಯಿತು. ಪ್ರೀತಂಗೌಡರಂತು ಹೆಚ್.ಡಿ.ರೇವಣ್ಣ ಕುಟುಂಬದ ಬಗ್ಗೆ ಲಘುವಾಗಿ ಟೀಕೆ ಮಾಡಿದರು. ಇದರಿಂದ ಕೆರಳಿದ ದಳಪತಿಗಳು 2023ರ ವಿಧಾನಸಭಾ ಚುನಾವಣೆಯಲ್ಲಿ ಪ್ರೀತಂಗೌಡರನ್ನು ಸೋಲಿಸಲು ಪಣತೊಟ್ಟು ಯಶಸ್ವಿಯಾದರು. ಇದು ಪ್ರೀತಂಗೌಡರ ನಿದ್ದೆಗೆಡಿಸಿದೆ. ಹಾಗಾಗಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಅಸಾಧ್ಯ: ಹೆಚ್.ಡಿ.ದೇವೇಗೌಡ
ಇದೀಗ ಪ್ರೀತಂಗೌಡರ ಬೆಂಬಲ ಮೈತ್ರಿ ಅಭ್ಯರ್ಥಿ ಪ್ರಜ್ವಲ್ಗೆ ಅಗತ್ಯವಿದೆ. ಆದರೆ ಇಬ್ಬರು ನಾಯಕರ ನಡುವೆ ನಡೆದಿರುವ ಯುದ್ಧ ಎಲ್ಲದಕ್ಕೂ ಅಡ್ಡಿಯಾಗಿದೆ. ಇದೇ ಕಾರಣಕ್ಕೆ ಏ.1ರಂದು ಬೆಂಗಳೂರಿನಲ್ಲಿ ಸಮನ್ವಯ ಸಭೆ ನಡೆಸಲಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ನೀಡಿದರು ಪ್ರೀತಂಗೌಡ ಮನಸ್ಸು ಬದಲಿಸಲಿಲ್ಲ. ಖುದ್ದು ಬಿ.ವೈ.ವಿಜಯೇಂದ್ರ ಅವರೇ ಪ್ರಜ್ವಲ್ ನಾಮಪತ್ರ ಸಲ್ಲಿಕೆಗೆ ಬಂದರೂ ಪ್ರೀತಂಗೌಡ ಹಾಜರಾಗಲಿಲ್ಲ. ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಜಿಲ್ಲೆಗೆ ಮೊದಲ ಭಾರಿ ಭೇಟಿ ನೀಡಿದಾಗ ಹಾಗೂ ಮಾಜಿ ಸಚಿವ ಸಿ.ಟಿ.ರವಿ ನಡೆಸಿದ ಸಮನ್ವಯ ಸಭೆಗೂ ಪ್ರೀತಂಗೌಡ ಗೈರಾಗಿದ್ದರು. ಇದರಿಂದ ಸಿಟ್ಟಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ದಿಢೀರ್ ಜಿಲ್ಲೆ ಆಗಮಿಸಿದ ರಾಧಾ ಮೋಹನ್ ದಾಸ್ ಅಗರ್ವಾಲ್ ಬಿಜೆಪಿ ಶಾಸಕರು, ಮುಖಂಡರು ಹಾಗೂ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಪ್ರಜ್ವಲ್ ವಿರುದ್ಧ ಅಸಮಾಧಾನ ಹೊರಹಾಕಿದ ಅಗರ್ವಾಲ್ ಹಾಗೂ ಮುಖಂಡರು ನೀವು ಜಿಲ್ಲೆಯ ಬಹುತೇಕ ಮುಖಂಡರನ್ನು ಭೇಟಿ ಮಾಡಿದ್ದೀರಿ. ಪ್ರೀತಂಗೌಡ ಅವರನ್ನು ಏಕೆ ಭೇಟಿ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಪ್ರಜ್ವಲ್ ಈಗಲೇ ಫೋನ್ ಮಾಡುತ್ತೇನೆ ಎಂದಿದ್ದಾರೆ. ಈಗ ಬೇಡ ಎಂದಿರುವ ಅಗರ್ವಾಲ್ ನಾಳೆ ಮೈಸೂರಿನಲ್ಲಿ ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಭೇಟಿಗೆ ಮೂಹೂರ್ತ ಫಿಕ್ಸ್ ಮಾಡುವ ಮೂಲಕ ವೈಮನಸ್ಸು ಶಮನ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು ತಂದಿದ್ದೇವೆ: ಡಿಕೆಶಿ
ಒಟ್ಟಿನಲ್ಲಿ ನಾಳಿನ ಮೈಸೂರಿನಲ್ಲಿ ಪ್ರೀತಂಗೌಡ ಹಾಗೂ ಪ್ರಜ್ವಲ್ ರೇವಣ್ಣ ಭೇಟಿ ಮಹತ್ವ ಪಡೆದುಕೊಂಡಿದೆ. ಇಬ್ಬರ ನಡುವೆ ನಡೆಯುವ ಸಂಧಾನ ಸಫಲವಾದರೆ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬಲ ಹೆಚ್ಚಲಿದೆ. ಆದರೆ ಏನೇ ಸಂಧಾನ ನಡೆದರು ಪ್ರೀತಂಗೌಡ ಸೋಲಿನ ಸೇಡನ್ನು ಮರೆತು ಪ್ರಜ್ವಲ್ಗೆ ಬೆಂಬಲ ನೀಡುವುದು ಬಹುತೇಕ ಅನುಮಾನವಾಗಿದೆ. ಇದನ್ನೂ ಓದಿ: ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗಲ್ಲ: ಕಾಂಗ್ರೆಸ್ ಶಾಸಕಿ ಪತ್ನಿಯಿದ್ದ ಮನೆ ಬಿಟ್ಟು ಹೋದ ಬಿಎಸ್ಪಿ ಅಭ್ಯರ್ಥಿ