ಬೆಳಗಾವಿ: ಬೆಳಗಾವಿ (Belagavi) ಕೇಂದ್ರಾಡಳಿತ ಪ್ರದೇಶ ಮಾಡಿ, ಇಲ್ಲ ಮರಾಠಿ (Marathi) ಭಾಷೆಯಲ್ಲಿ ಸರ್ಕಾರಿ ದಾಖಲಾತಿ ನೀಡಿ ಎಂದು ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ ಅಂಗೀಕಾರವಾಗಿದೆ.
ಬೆಳಗಾವಿ ತಾಲೂಕಿನ ಬೆಳಗುಂದಿಯಲ್ಲಿ ರವಳನಾಥ ಪಂಚಕ್ರೋಶಿ ಸಾಹಿತ್ಯ ಅಕಾಡೆಮಿ ವತಿಯಿಂದ ಮರಾಠಿ ಸಮ್ಮೇಳನ ನಡೆದಿತ್ತು. ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಎಂಇಎಸ್ ಮುಖಂಡ ಶಿವಾಜಿ ಸುಂಟಕರ್ ಚಾಲನೆ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಗಡಿಭಾಗವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಅಂಬುಲೆನ್ಸ್ ಬಾರದೇ ಗರ್ಭಿಣಿಯನ್ನು ಮೂರುವರೆ ಕಿಮೀ ಡೋಲಿಯಲ್ಲೇ ಹೊತ್ತೊಯ್ದರು
ಕರ್ನಾಟಕ (Karnataka) – ಮಹಾರಾಷ್ಟ್ರ (Maharashtra) ಗಡಿವಿವಾದ ಇತ್ಯರ್ಥವಾಗುವವರೆಗೆ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ, ಇಲ್ಲವೇ ಗಡಿಭಾಗದಲ್ಲಿ ಮರಾಠಿ ಭಾಷಿಕರಿಗೆ ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲಾತಿ ನೀಡಲಿ. ಈ ಸಂಬಂಧ ಕೇಂದ್ರ ಸರ್ಕಾರ ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲಿ ಎಂದು ನಿರ್ಣಯ ಮಾಡಿದರು. ಅಷ್ಟೇ ಅಲ್ಲದೇ ಮಹಾರಾಷ್ಟ್ರ ಸರ್ಕಾರ ಮರಾಠಿ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ನೀಡಲು ಆಗ್ರಹಿಸಿದರು. ಮರಾಠಿ ಸಾಹಿತ್ಯ ಸಮ್ಮೇಳನದ ನಿರ್ಣಯಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಮರಾಠಿ ಸಾಹಿತ್ಯ ಸಮ್ಮೇಳನ ಆಯೋಜಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಇದನ್ನೂ ಓದಿ: ಆಸ್ತಿಗಾಗಿ ಸುಪಾರಿ ಕೊಟ್ಟು ತಂದೆಯನ್ನೇ ಕೊಲ್ಲಿಸಿದ ಪಾಪಿ ಮಕ್ಕಳು