ಭೋಪಾಲ್: ಬಾಲಕಿಯ ಮೇಲೆ ಕಾರೊಂದು ಹರಿದಿದ್ದಕ್ಕೆ ಆಕ್ರೋಶಗೊಂಡ ಗುಂಪೊಂದು ವಾಹನಕ್ಕೆ ಬೆಂಕಿ ಹಾಕಿ, ಚಾಲಕನನ್ನು ಆ ಬೆಂಕಿಗೆ ನೂಕಿ ಕೊಂದ ಘಟನೆ ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ನಡೆದಿದೆ.
ಚಾಲಕ ಮಗನ್ ಸಿಂಗ್ (43) ಚಾಲಕ. ಈತ ಜಿಲ್ಲಾ ಕೇಂದ್ರದಿಂದ ಸುಮಾರು 38 ಕಿ.ಮೀ ದೂರದಲ್ಲಿರುವ ಬರ್ಜಾರ್ ಕ್ರಾಸಿಂಗ್ನಲ್ಲಿ 6 ವರ್ಷದ ಬಾಲಕಿಯ ಮೇಲೆ ವಾಹನ ಹರಿಸಿದ್ದ. ಇದರ ಪರಿಣಾಮವಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಳು. ಇದರಿಂದಾಗಿ ಅಲ್ಲಿದ್ದ ಜನರು ಆಕ್ರೋಶಗೊಂಡು ಕಾರಿಗೆ ಬೆಂಕಿ ಹಚ್ಚಿದ್ದಾರೆ.
ಕಾರಿನ ಚಾಲಕ ಮಗನ್ ಸಿಂಗ್ರನ್ನು ಹಿಡಿದು ಥಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಜನರು ವಾಹನಕ್ಕೆ ಬೆಂಕಿ ಹಚ್ಚಿ, ಆ ಬೆಂಕಿಗೆ ಚಾಲಕನನ್ನು ತಳ್ಳಿದ್ದಾರೆ. ಚಾಲಕನಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗುಜರಾತ್ನ ದಾಹೋಡ್ಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಚಾಲಕ ಮೃತಪಟ್ಟಿದ್ದಾನೆ. ಇದನ್ನೂ ಓದಿ: ತಂದೆ, ಮಗನ ಮಧ್ಯೆ ಜಗಳ- ಕೊಲೆಯೊಂದಿಗೆ ಅಂತ್ಯ
ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೀಡಿಯೋವನ್ನು ಆಧರಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಇದನ್ನೂ ಓದಿ: ಆಭರಣ ಅಂಗಡಿಗೆ ನುಗ್ಗಿ ದರೋಡೆಗೆ ಯತ್ನ – ಕಳ್ಳನ ಲಾಂಗ್ ಕಿತ್ತು ಕಳುಹಿಸಿದ ಮಾಲೀಕ