ಭೋಪಾಲ್: ಮಧ್ಯಪ್ರದೇಶದ ರಾಜಕೀಯ ಹೈಡ್ರಾಮಾಗೆ ಇಂದು ತೆರೆಬೀಳಲಿದ್ದು, ಸಿಎಂ ಕಮಲ್ನಾಥ್ ವಿಶ್ವಾಸಮತ ಸಾಬೀತಿಗೂ ಮುನ್ನ ಪದತ್ಯಾಗ ಮಾಡಲಿದ್ದಾರೆ ಎಂಬ ಸುಳಿವನ್ನು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೀಡಿದ್ದಾರೆ.
ಸುಪ್ರೀಂಕೋರ್ಟ್ ಇಂದು ಸಂಜೆ 5 ಗಂಟೆಯೊಳಗೆ ವಿಶ್ವಾಸಮತ ಸಾಬೀತು ಪಡಿಸಬೇಕೆಂದು ಸೂಚನೆ ನೀಡಿತ್ತು. ಮ್ಯಾಜಿಕ್ ನಂಬರ್ ಇಲ್ಲದ ಕಾರಣ ಸಿಎಂ ಕಮಲನಾಥ್ ಪದತ್ಯಾಗ ಮಾಡಿದ್ದಾರೆ. ಈ ಕುರಿತು ಮಾತಾಡಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, 22 ಶಾಸಕರ ರಾಜೀನಾಮೆಯಿಂದಾಗಿ ನಮ್ಮ ಬಳಿ ಬಹುಮತ ಇಲ್ಲ. ಹಣ ಮತ್ತು ಅಧಿಕಾರ ಪ್ರಯೋಗದಿಂದಾಗಿ ಬಹುಮತದ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಸಂಜೆಯೊಳಗೆ ಕಮಲ್ನಾಥ್ ಬಹುಮತ ಸಾಬೀತು ಮಾಡದಿದ್ದರೆ ಸರ್ಕಾರ ಪತನವಾಗೋದು ಖಚಿತವಾಗಲಿದೆ. ವಿಶ್ವಾಸಮತ ಸಾಬೀತಿಗೂ ಮುನ್ನವೇ ದಿಗ್ವಿಜಯ್ ಸಿಂಗ್ ತಮ್ಮ ಬಳಿ ಬಹುಮತವಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿದ್ದ ದಿಗ್ವಿಜಯ್ ಸಿಂಗ್ ನಗರದ ಹೊರವಲಯದ ರೆಸಾರ್ಟಿನಲ್ಲಿ ಉಳಿದುಕೊಂಡಿರುವ ಮಧ್ಯಪ್ರದೇಶದ ಶಾಸಕರ ಭೇಟಿಗೆ ಮುಂದಾಗಿದ್ದರು. ಆದ್ರೆ ಪೊಲೀಸರು ಭೇಟಿಗೆ ಅವಕಾಶ ಕಲ್ಪಿಸಲಿಲ್ಲ.