ಕೊಪ್ಪಳ: ಲೋಕಸಭಾ ಚುನಾವಣೆಗೆ ಪಕ್ಷದ ಪರವಾಗಿ ಸರಿಯಾಗಿ ಕೆಲಸ ಮಾಡದ್ದಕ್ಕೆ ಜಿಲ್ಲೆಯ ಬಿಜೆಪಿ ನಾಯಕರಿಗೆ ಆರ್ಎಸ್ಎಸ್ ಮುಖಂಡರು ಫುಲ್ ಕ್ಲಾಸ್ ಮಾಡಿದ್ದಾರೆ.
ಗುರುವಾರ ರಾತ್ರಿ ನಗರದ ಖಾಸಗಿ ಹೋಟೆಲಿನಲ್ಲಿ ಆರ್ಎಸ್ಎಸ್ ಮುಖಂಡರಾದ ದತ್ತಾತ್ರೇಯ ವಜ್ರಳ್ಳಿ, ಅಯ್ಯನಗೌಡ್ರು ಹೇರೂರು ಜಿಲ್ಲೆಯ ಬಿಜೆಪಿಯ ಪ್ರಮುಖ ನಾಯಕರ ಜೊತೆ ನಡೆದ ಗೌಪ್ಯ ಸಭೆ ನಡೆಸಿದ್ದಾರೆ. ಈ ವೇಳೆ ಚುನಾವಣೆಗೆ ಯಾವೆಲ್ಲ ರೀತಿ ಸಿದ್ಧತೆ ನಡೆದಿದೆ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದ್ದಕ್ಕೆ ಫುಲ್ ಕ್ಲಾಸ್ ಮಾಡಿದ್ದಾರೆ ಎಂದು ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
ಸರಿಯಾಗಿ ಪ್ರಚಾರ ನಡೆಸಿಲ್ಲ. ಇವಿಎಂ ಮಾದರಿ ಕೊಟ್ಟಿಲ್ಲ ಯಾಕೆ ಎಂದು ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಸೇರಿದಂತೆ ಬಿಜೆಪಿ ಮುಖಂಡರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲದೇ ಇದ್ದರೆ ಹೇಳಿ, ನಮ್ಮ ಸ್ವಯಂ ಸೇವಕರಿಂದ ಚುನಾವಣೆ ನಡೆಸುತ್ತೇವೆ ಎಂದು ಮುಖಂಡರು ಕಮಲ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಆರ್ಎಸ್ಎಸ್ ನಾಯಕರ ಕ್ಲಾಸ್ ಗೆ ಬೆಚ್ಚಿಬಿದ್ದ ಬಿಜೆಪಿ ಮುಖಂಡರು ರಾತ್ರೋ ರಾತ್ರಿ ಇವಿಎಂ ಮಾದರಿಯನ್ನು ಪ್ರಿಂಟ್ ಮಾಡಿ ಈಗ ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ.