ಕೊಪ್ಪಳ: ಚುನಾವಣೆ ಮುಗಿದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರಿಗೆ ಶಾಸಕ ಶ್ರೀರಾಮುಲು ಅವರು, ಯಡಿಯೂರಪ್ಪ ಎಲ್ಲದ್ದೀಯಪ್ಪಾ ಅಂತ ಕೇಳಬಾರದು. ಅಷ್ಟೇ ಅಲ್ಲದೆ ರಾಮುಲು ಎಲ್ಲದ್ದೀಯಪ್ಪಾ ಅಂತ ಬಿ.ಎಸ್.ಯಡಿಯೂರಪ್ಪ ಪ್ರಶ್ನಿಸಬಾರದು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವರು, ಬಿಜೆಪಿಯಲ್ಲಿ ಶಾಸಕ ಶ್ರೀರಾಮಲು ಅವರನ್ನು ಯ್ಯೂಸ್ ಆ್ಯಂಡ್ ಥ್ರೋ ಮಾಡಿಕೊಳ್ಳಲಾಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕೊಪ್ಪಳದಲ್ಲಿ ಹೆಚ್ಚುಮತ ಪಡೆಯಲು ಶ್ರೀರಾಮಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಅಂತ ಭರವಸೆ ನೀಡಿದ್ದರು. ಬಹುಮತ ಸಿಗದೆ ಸರ್ಕಾರ ರಚನೆ ಮಾಡಲು ವಿಫಲರಾದರು. ಶ್ರೀರಾಮುಲು ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನು ನೀಡಬಹುದಿತ್ತು. ಆದರೆ ನೀಡಲಿಲ್ಲ ಎಂದು ಆರೋಪಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರೇ ಕಾರಣ. ಮತ ಹಾಗೂ ದುಡ್ಡಿಗಾಗಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಬೇಕು. ಆದರೆ ಅವರಿಗೆ ಅಧಿಕಾರ ನೀಡಲಿಲ್ಲ. ಶ್ರೀರಾಮಲು ಮುಗ್ಧರು, ಒಳ್ಳೆಯ ನಾಯಕರು ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿರಗುಪ್ಪದಲ್ಲಿ ಏಪ್ರಿಲ್ 19 ರಂದು ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರು ಏಪ್ರಿಲ್ 21ರಂದು ಸಿಂಧನೂರ ಹಾಗೂ ಗಂಗಾವತಿ ತಾಲೂಕಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬರಲಿದ್ದಾರೆ ಎಂದು ತಿಳಿಸಿದರು.