ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಸೂರ್ಯ ಯಾರ ಆಯ್ಕೆ ಗೊತ್ತಿಲ್ಲ. ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಟಿಕೆಟ್ ಕೈತಪ್ಪಿದ್ದು ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಬಸವನಗುಡಿಯಲ್ಲಿರುವ ತೇಜಸ್ವಿನಿ ಅನಂತ್ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಟಿಕೆಟ್ ಕೈತಪ್ಪಿದ್ದಕ್ಕೆ ತೇಜಸ್ವಿನಿ ಅವರಿಗೂ ನೋವುಂಟಾಗಿದೆ. ಈಗಾಗಲೇ ಅನೇಕ ನಾಯಕರು ಅವರಿಗೆ ಸಾಂತ್ವನ ಹೇಳಿದ್ದಾರೆ. ತೇಜಸ್ವಿ ಸೂರ್ಯ ಆಯ್ಕೆಯ ಬಗ್ಗೆ ಯಾವುದೇ ಕಮೆಂಟ್ ಮಾಡಲ್ಲ ಎಂದು ತಿಳಿಸಿದರು.
ತೇಜಸ್ವಿನಿ ಅನಂತ್ಕುಮಾರ್ ಹೆಸರನ್ನು ಹೊರತುಪಡಿಸಿ ಬೇರೆ ಯಾವುದೇ ಹೆಸರನ್ನು ರಾಜ್ಯ ನಾಯಕರು ಶಿಫಾರಸ್ಸು ಮಾಡಿರಲಿಲ್ಲ. ಆದರೆ ತೇಜಸ್ವಿ ಸೂರ್ಯ ಅವರ ಹೆಸರು ಮಧ್ಯದಲ್ಲಿ ಹೇಗೆ ಸೇರಿತು ಎನ್ನುವುದು ನಮಗೆ ಗೊತ್ತಿಲ್ಲ. ಹಿರಿಯ ನಾಯಕನಾಗಿ ಹೈಕಮಾಂಡ್ ಆದೇಶವನ್ನು ಪಾಲಿಸಬೇಕಾಗುತ್ತದೆ. ತೇಜಸ್ವಿ ಸೂರ್ಯ ಪರ ಪ್ರಚಾರ ಮಾಡುತ್ತೆವೆ ಎಂದು ಸ್ಪಷ್ಟನೆ ನೀಡಿದರು.