ಕಾರವಾರ: ಲಾಕ್ಡೌನ್ನಿಂದ ಅದೆಷ್ಟೋ ಮಂದಿ ಕಷ್ಟಗಳನ್ನು ಅನುಭವಿಸುತ್ತಿದ್ದು, ಒಂದು ದಿನದ ತುತ್ತಿಗೂ ಕಷ್ಟಪಡುತ್ತಿದ್ದಾರೆ. ಹೀಗಾಗಿ ಇಂತಹ ಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಪಬ್ಲಿಕ್ ಟಿವಿ ‘ಮನೆಯೇ ಮಂತ್ರಾಲಯ’ ಕಾರ್ಯಕ್ರಮ ನಡೆಸುತ್ತಿದ್ದು, ಜನರು ಪ್ರತಿ ದಿನ ಕ್ರಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಕಷ್ಟಗಳನ್ನು ಹೇಳಿಕೊಂಡು ಸಹಾಯ ಪಡೆದಿದ್ದಾರೆ. ಈ ಕಾರ್ಯಕ್ರಮದ ಕರೆಗೆ ಸ್ಪಂದಿಸಿದ ಶಿರಸಿಯ ಎಂ.ಆರ್ ಬ್ರದರ್ಸ್ ತಂಡ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್ಗಳನ್ನು ವಿತರಿಸಿ ನೆರವಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದಲ್ಲಿ ಗುಜುರಿ ವ್ಯಾಪಾರ ಮಾಡುತ್ತಿದ್ದ ನಾಗಪ್ಪ ಎಂಬವರು ಶುಕ್ರವಾರ ‘ಮನಯೇ’ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆಮಾಡಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಸಹಾಯ ಬೇಡಿದ್ದರು. ಇದಕ್ಕೆ ಸ್ಪಂದಿಸಿದ ಪಬ್ಲಿಕ್ ಟಿವಿ ಅಭಿಮಾನಿಗಳು ಶಿರಸಿಯ ಫೈಯು ಚೌಟಿ ಅವರ ಸಹಕಾರದಲ್ಲಿ ಗುಜರಿ ವ್ಯಾಪಾರಿ ನಾಗಪ್ಪ ಅವರಿಗೆ ಅಗತ್ಯ ವಸ್ತುಗಳನ್ನು ನೀಡಿ, ಜೊತೆಗೆ ತಾತ್ಕಾಲಿಕವಾಗಿ ಸಹಾಯವಾಗಲು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಇದರ ಜೊತೆಗೆ ಫೈಯು ಚೌಟಿರವರ ಎಂ.ಆರ್ ಬ್ರದರ್ಸ್ ತಂಡವು ಇದೇ ಭಾಗದಲ್ಲಿ ತೊಂದರೆಗೊಳಗಾದ ಬಡವರಿಗೆ ನಾಲ್ಕು ಲಕ್ಷ ರೂ. ಮೌಲ್ಯದ ಆಹಾರ ಕಿಟ್ಗಳನ್ನು ವಿತರಿಸುವ ಮೂಲಕ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಗಿದ್ದಾರೆ.