– ವಿಧಿ ಬಹಳ ಹಿಂದೆಯೇ ಇದನ್ನು ನಿರ್ಧರಿಸಿತ್ತು ಎಂದ ಬಿಜೆಪಿ ಹಿರಿಯ ನಾಯಕ
ನವದೆಹಲಿ: ಅಯೋಧ್ಯೆಯಲ್ಲಿ ಶ್ರೀರಾಮಂದಿರ (Ayodhya Ram Mandir) ನಿರ್ಮಾಣವಾಗಬೇಕು ಅನ್ನೋದು ದೈವಿಕ ಕನಸು. ಅದನ್ನು ವಿಧಿ ಬಹಳ ಹಿಂದೆಯೇ ನಿರ್ಧರಿಸಿತ್ತು. ಅದಕ್ಕಾಗಿ ವಿಧಿಯೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಬಿಜೆಪಿ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ (LK Advani) ಅಭಿಪ್ರಾಯಪಟ್ಟಿದ್ದಾರೆ.
`ರಾಮ ಮಂದಿರ ನಿರ್ಮಾಣ್, ಏಕ ದಿವ್ಯ ಸ್ವಪ್ನ ಕಿ ಪೂರ್ತಿ’ (ರಾಮ ಮಂದಿರ ನಿರ್ಮಾಣ – ದಿವ್ಯ ಕನಸಿನ ಈಡೇರಿಕೆ) ಎಂಬ ಶೀರ್ಷಿಕೆಯೊಂದಿಗೆ ಅಡ್ವಾಣಿ ಅವರು ಬರೆದಿರುವ ಈ ಲೇಖನದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ 33 ವರ್ಷಗಳ ಹಿಂದೆ ನಡೆಸಿದ ‘ರಥಯಾತ್ರೆ’ಯನ್ನು (Rath Yatra) ಸ್ಮರಿಸಿಕೊಂಡಿದ್ದಾರೆ. ಈ ಲೇಖನದಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯಾಗಬೇಕೆಂಬ ದೈವಿಕ ಕನಸು ನನಸಾಗಿದೆ ಎಂದು ಉಲ್ಲೇಖಿಸಿದ್ದಾರೆ. `ರಾಷ್ಟ್ರಧರ್ಮ’ (Rashtradharma) ಹಿಂದಿ ಪತ್ರಿಕೆಯಲ್ಲಿ ಜನವರಿ 16ರಂದು ಅಡ್ವಾಣಿಯವರ ಈ ಲೇಖನ ಪ್ರಕಟಗೊಳ್ಳಲಿದೆ. ಈ ಲೇಖನವನ್ನು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗೆ ನೀಡಲಾಗುತ್ತದೆ.
ಈ ಕುರಿತು ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಡ್ವಾಣಿ ಅವರು, ತಮ್ಮ ರಥಯಾತ್ರೆ ಹಾಗೂ ರಾಮಮಂದಿರ ನಿರ್ಮಾಣ ಕುರಿತು ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂದಿರ ನಿರ್ಮಾಣಕ್ಕಾಗಿ ಶ್ರೀರಾಮನೇ ತನ್ನ ಭಕ್ತ ಮೋದಿಯನ್ನ ಆಯ್ಕೆ ಮಾಡಿಕೊಂಡಿದ್ದಾನೆ ಎಂಬುದಾಗಿ ಹೇಳಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮಮಂದಿರಕ್ಕೆ 4 ಮಾರ್ಗ – ರಾಮನೂರಿಗೆ ಬರುವ ಭಕ್ತರಿಗಿದು ಮೋಕ್ಷದ ಹಾದಿ
ಅಯೋಧ್ಯೆ ಚಳವಳಿಯು ಅತ್ಯಂತ ನಿರ್ಣಾಯಕ ಮತ್ತು ಪರಿವರ್ತನೆಯ ಘಟನೆ. ಈಗ ಅದು 33 ವರ್ಷಗಳನ್ನು ಪೂರೈಸಿದೆ. 1990 ಸೆಪ್ಟೆಂಬರ್ 25ರಂದು ರಂದು ಬೆಳಗ್ಗೆ ರಥಯಾತ್ರೆಯನ್ನು ಪ್ರಾರಂಭಿಸಿದಾಗ, ಈ ಯಾತ್ರೆಯು ಭಗವಾನ್ ರಾಮನ ಮೇಲಿನ ನಂಬಿಕೆಯು ದೇಶದಲ್ಲಿ ಒಂದು ಚಳವಳಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ನಮಗೆ ತಿಳಿದಿರಲಿಲ್ಲ. ಆಗ ಮೋದಿ ಸಹ ಹೆಚ್ಚು ಪ್ರಸಿದ್ಧಿಯಾಗಿರಲಿಲ್ಲ. ರಥಯಾತ್ರೆ ಪ್ರಾರಂಭವಾದ ಕೆಲ ದಿನಗಳ ನಂತರ ಅದಕ್ಕೆ ನಾನು ಕೇವಲ ಸಾರಥಿ ಎಂಬುದನ್ನು ಅರಿತುಕೊಂಡೆ. ಒಂದಲ್ಲ ಒಂದು ದಿನ ಭವ್ಯ ರಾಮಮಂದಿರ ನಿರ್ಮಾಣವಾಗುತ್ತದೆ ಎಂದು ವಿಧಿಯೇ ನಿರ್ಧರಿಸಿದೆ ಎಂದು ಆ ಸಮಯದಲ್ಲಿ ನಾನು ಭಾವಿಸಿದ್ದೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ರಾಮಮಂದಿರ ಥೀಮ್ನ ಬನಾರಸಿ ಸೀರೆಗಳಿಗೆ ಹೊರ ದೇಶಗಳಲ್ಲೂ ಇದೆ ಬೇಡಿಕೆ- ವಿಶೇಷತೆ ಏನು..?
ಇದೀಗ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣಪ್ರತಿಷ್ಠೆ ನೆರವೇರಿಸಲಿದ್ದಾರೆ. ಭಾರತದ ಪ್ರತಿಯೊಬ್ಬ ನಾಗರಿಕನೂ ಈ ಕ್ಷಣವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಎಲ್ಲ ಭಾರತೀಯರೂ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವಂತೆ ನಾನು ಪ್ರಾರ್ಥಿಸುತ್ತೇನೆ ಎಂದು ಅಡ್ವಾಣಿ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ನಾಸಿಕ್ನಿಂದಲೇ ವ್ರತ ಆರಂಭಿಸಿದ್ದು ಯಾಕೆ? ರಾಮಾಯಣಕ್ಕೂ ನಾಸಿಕ್ಗೂ ಏನು ಸಂಬಂಧ?