ವಿಜಯಪುರ: ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಲಿಂಗಾಯತ ಧರ್ಮದ ವಿಚಾರವಾಗಿ ಅಸಮಾಧಾನ ಎದ್ದಿದೆ. ವಿಧಾನಸಭಾ ಚುನಾವಣೆಯ ಬಳಿಕ ತಣ್ಣಗೆ ಆಗಿದ್ದ ಧರ್ಮ ರಾಜಕೀಯ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ವೇಳೆ ಮತ್ತೆ ಪ್ರತ್ಯಕ್ಷವಾಗಿದೆ.
ಮತ್ತೆ ಲಿಂಗಾಯದ ಧರ್ಮ ವಿಚಾರ ಪ್ರಸ್ತಾಪವಾಗಲು ಕಾರಣವಾಗಿದ್ದು ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ಒಂದು ಹೇಳಿಕೆ. ಡಿಕೆಶಿ ಲಿಂಗಾಯತ ಧರ್ಮ ವಿಚಾರದಲ್ಲಿ ನಮ್ಮ ಸರ್ಕಾರ ತಪ್ಪು ಮಾಡಿದೆ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಿರಂಗ ಹೇಳಿಕೆ ನೀಡಿದ್ದೆ ತಂಡ ಮಾಜಿ ಜಲ ಸಂಪನ್ಮೂಲ ಸಚಿವ, ಲಿಂಗಾಯತ ಧರ್ಮ ವಿಚಾರದಲ್ಲಿ ಭಾರೀ ಹೋರಾಟ ನಡೆಸಿದ್ದ ಎಂಬಿ ಪಾಟೇಲ್ ನೇರವಾಗಿ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಡಿಕೆಶಿ ಹೇಳಿದ್ದು ಏನು?
ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಚಾರದಲ್ಲಿ ಧರ್ಮ ವಿಭಜನೆ ಕುರಿತು ಪ್ರಥಮ ಬಾರಿಗೆ ಸಚಿವ ಡಿ ಕೆ ಶಿವಕುಮಾರ್ ತಪ್ಪೊಪ್ಪಿಕೊಂಡಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶರನ್ನವರಾತ್ರಿ ಅಂಗವಾಗಿ ರಂಭಾಪುರಿ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಧರ್ಮಸಮ್ಮೇಳನ ಕಾರ್ಯಕ್ರಮದಲ್ಲಿ ಬುಧವಾರ ರಾತ್ರಿ ಭಾಗವಹಿಸಿ ಸಚಿವ ಡಿ ಕೆ ಶಿವಕುಮಾರ್ ಕ್ಷಮೆಯಾಚಿಸಿದರು.
ನಮ್ಮ ಸರ್ಕಾರದಲ್ಲಿ ನಾವು ದೊಡ್ಡ ತಪ್ಪನ್ನು ಮಾಡಿದ್ದೇವೆ. ಸರ್ಕಾರದವರು, ರಾಜಕೀಯದವರು ಧರ್ಮದ ವಿಚಾರದಲ್ಲಿ ಜಾತಿಯ ವಿಚಾರದಲ್ಲಿ ಕೈ ಹಾಕಬಾರದು. ನಮ್ಮ ಸರ್ಕಾರದಿಂದ ದೊಡ್ಡ ಅಪರಾಧವಾಗಿದೆ. ನಾನೂ ಸಹ ಆ ಸರ್ಕಾರದಲ್ಲಿ ಮಂತ್ರಿಯಾಗಿದ್ದೆ. ನಮ್ಮ ಬೇರೆ ಸಚಿವರು ವಿಭಿನ್ನವಾಗಿ ಮಾತಾಡಿದರು. ಆದ್ರೆ ಸರ್ಕಾರದ ತೀರ್ಮಾನ ಆ ಸಂದರ್ಭದಲ್ಲಿ ಬೇಕಾದಷ್ಟು ಅಲ್ಲೋಲ ಕಲ್ಲೋಲ ಸೃಷ್ಟಿಯಾಯ್ತು. ರಾಜಕೀಯದಲ್ಲಿ ಅನೇಕ ವಿಭಿನ್ನವಾದ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಯಾವುದೇ ಸರ್ಕಾರ ಧರ್ಮದಲ್ಲಿ ಕೈ ಹಾಕಬಾರದು ಎನ್ನೋದಕ್ಕೆ ಮೊನ್ನೆ ನಡೆದ ಜನಾಭಿಪ್ರಾಯವೇ ಸಾಕ್ಷಿ ಎಂದರು.
ಇದೇ ವೇಳೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ಸಚಿವ ಡಿ ಕೆ ಶಿವಕುಮಾರ್, ದಯವಿಟ್ಟು ನಾವು, ಸರ್ಕಾರ ತಪ್ಪು ಮಾಡಿದ್ರೆ ನಿಮ್ಮ ಕ್ಷಮಾಪಣೆ ಇರಲಿ. ಹೃದಯತುಂಬಿ ನಮ್ಮನ್ನು ಕ್ಷಮಿಸಿ ಎಂದರು. ಇದೇ ವೇಳೆ ಧರ್ಮದಲ್ಲಿ ರಾಜಕಾರಣ ಮಾಡಬಾರದು. ರಾಜಕೀಯದ ಮೂಲಕ ಧರ್ಮ ಉಳಿಸಬೇಕು. ಧರ್ಮವನ್ನು ಹಾಳು ಮಾಡುವ ಕೆಲಸಕ್ಕೆ ಹೋಗಬಾರದು ಅಂತ ಅಭಿಪ್ರಾಯ ವ್ಯಕ್ತಪಡಿಸಿದರು.
ಎಂಬಿ ಪಾಟೀಲ್ ಹೇಳಿದ್ದು ಏನು?
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ತಪ್ಪಿ ಮಾಡಿದ್ದೇವೆ ಎನ್ನುವ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಂಬಿ ಪಾಟೀಲ್, ಡಿಕೆ ಶಿವಕುಮಾರ್ ಅವರು ಆತ್ಮ ಅವಲೋಕನ ಮಾಡಿಕೊಳ್ಳಲಿ. ಅಂದು ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ನಾನು ಸಚಿವನಾಗಿದ್ದೆ. ಅದರಲ್ಲಿ ಯಾರೇ ಒಬ್ಬ ವೈಯಕ್ತಿಕವಾಗಿ ಅರ್ಜಿ ಕೊಟ್ಟರೂ, ಯಾವುದೇ ಒಂದು ಸಂಘ ಸಂಸ್ಥೆ ಮನವಿ ಕೊಡಲಿ. ಆ ಮನವಿ ಮೇಲೆ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಸಿದ್ದರಾಮಯ್ಯ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಬಗ್ಗೆ ಸರ್ಕಾರಕ್ಕೆ ಮನವಿ ಬಂದಿತ್ತು. ಸಮಿತಿ ರಚಿಸಿ ಅದನ್ನು ಅಲ್ಪಸಂಖ್ಯಾತ ಆಯೋಗಕ್ಕೆ ವರದಿ ನೀಡುವಂತೆ ಕೊಡಲಾಗಿತ್ತು. ಈಗ ವರದಿ ಕೇಂದ್ರ ಸರ್ಕಾರದ ಮುಂದೆ ಇದೆ ಇದರಲ್ಲಿ ಸರ್ಕಾರ ಯಾವುದೇ ಹಸ್ತಕ್ಷೇಪ ಮಾಡಿಲ್ಲ. ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ನಾಲ್ಕು ಗೋಡೆಗಳಲ್ಲಿ ಮಾತನಾಡುತ್ತೇನೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೆ ಮತ ಬೀಳಲಿಲ್ಲ ಎನ್ನುವ ಬಗ್ಗೆ ಡಿಕೆಶಿ ಪರಾಮರ್ಶಿಸಿಕೊಳ್ಳಲಿ ಎಂದು ಟಾಂಗ್ ನೀಡಿದ ಎಂಬಿ ಪಾಟೀಲ್ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ಗೆ ಎಷ್ಟು ಬಲ ಸಿಕ್ಕಿದೆ? ಆ ಭಾಗದಲ್ಲಿ ಎಷ್ಟು ಶಕ್ತಿ ಇದೆ ಎನ್ನುವುದು ಗೊತ್ತು ಮಾಡಿಕೊಳ್ಳಲಿ ಎಂದು ಸವಾಲನ್ನು ಎಸೆದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv