ಬೆಂಗಳೂರು: ಸಿ.ಟಿ. ರವಿ (CT Ravi) ಅವರು ಮೊದಲು ತಮ್ಮ ವಾಯ್ಸ್ ಸ್ಯಾಂಪಲ್ ನೀಡಿ, ಆ ಬಳಿಕ ಬೇರೆಯವರ ಬಗ್ಗೆ ಮಾತನಾಡಲಿ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಖಾರವಾಗಿ ತಿರುಗೇಟು ನೀಡಿದ್ದಾರೆ.
ತೇಜಸ್ ಗೌಡ (Tejas Gowda) ಅವರ ಮನೆಗೆ ಗೃಹ ಸಚಿವರೇ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕಿಸಿದ್ದಾರೆ ಎಂಬ ಸಿ.ಟಿ. ರವಿ ಅವರ ಆರೋಪಕ್ಕೆ ಬೆಂಗಳೂರಿನಲ್ಲಿ (Bengaluru) ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಬಿಜೆಪಿಯ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿ.ಟಿ. ರವಿ, ಪ್ರಹ್ಲಾದ್ ಜೋಶಿ ಅವರಂತಹ ನಾಯಕರು ಕೇವಲ ಮಾಧ್ಯಮಗಳ ಮುಂದೆ ಬಂದು ಆರೋಪ ಮಾಡುವುದನ್ನು ಬಿಟ್ಟು, ಅಧಿಕೃತವಾಗಿ ದೂರು ದಾಖಲಿಸಲಿ. ಯಾವ ಅಧಿಕಾರಿ ಹೋಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದರೆ, ನಾನು ಖಂಡಿತವಾಗಿಯೂ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಬೆದರಿಕೆ ಹಾಕಲು ನಾನೇ ಪೊಲೀಸರನ್ನು ಕಳುಹಿಸಿದ್ದೇನೆ ಎಂದು ಅವರ ಬಳಿ ಆಧಾರವಿದ್ದರೆ, ಮೊದಲು ನನ್ನ ಮೇಲೆಯೇ ದೂರು ಕೊಡಲಿ. ಅತ್ಯಂತ ಪಾರದರ್ಶಕವಾಗಿ ನನ್ನ ವಿರುದ್ಧವೇ ನಾನು ತನಿಖೆ ಮಾಡಿಸಿಕೊಳ್ಳಲು ಸಿದ್ಧನಿದ್ದೇನೆ. ಬೇಕಿದ್ದರೆ ಇದಕ್ಕಾಗಿ ಒಂದು ವಿಶೇಷ ಸಮಿತಿ ರಚಿಸಿ, ಅದಕ್ಕೆ ಸಿ.ಟಿ. ರವಿ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇನೆ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಟಾಕ್ಸಿಕ್ ಚಿತ್ರ ಫಸ್ಟ್ ವಿಡಿಯೋ ಸಾಂಗ್ ರಿಲೀಸ್ – ಯಶ್ ಕಿಯಾರಾ ಕೆಮಿಸ್ಟ್ರಿಗೆ ನೆಟ್ಟಿಗರು ಫಿದಾ
ತಮ್ಮದೇ ಒಂದು ವಾಯ್ಸ್ ಸ್ಯಾಂಪಲ್ ಕೊಡಲು ಸಾಧ್ಯವಾಗದ ವ್ಯಕ್ತಿ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಧ್ವನಿ ಮಾದರಿ ನೀಡಲು ಒಪ್ಪದೆ ಸುಪ್ರೀಂ ಕೋರ್ಟ್ಗೆ (Supreme Court) ಹೋಗಿ ತಡೆಯಾಜ್ಞೆ ತಂದಿದ್ದಾರೆ. ಇಂತಹವರು ಯಾವ ಪುರುಷಾರ್ಥಕ್ಕೆ ಮಾತನಾಡುತ್ತಾರೆ? ಮೊದಲು ಸಿ.ಟಿ. ರವಿ ತಮ್ಮ ವಾಯ್ಸ್ ಸ್ಯಾಂಪಲ್ ಕೊಡಲಿ, ಆಮೇಲೆ ಮಾತನಾಡಲಿ ಎಂದು ಕಿಡಿಕಾರಿದರು.
ಬೆಳಗಾವಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪ್ರಚಾರ ಸಭೆ ನಡೆಸುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಅದೊಂದು ಖಾಸಗಿ ಕಾರ್ಯಕ್ರಮ ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವುದು ಆರ್ಎಸ್ಎಸ್ನ ಖಾಸಗಿ ಕಾರ್ಯಕ್ರಮ. ಖಾಸಗಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ನಮ್ಮ ಸರ್ಕಾರದ ಅನುಮತಿಯ ಅಗತ್ಯವಿಲ್ಲ. ಆದರೆ ಅವರು ಸಾರ್ವಜನಿಕವಾಗಿ ಬೀದಿಗಿಳಿದು ಮೆರವಣಿಗೆ ಅಥವಾ ದೊಡ್ಡ ಸಮಾವೇಶ ನಡೆಸಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಸ್ಥಳೀಯ ಕಾನೂನು ಸುವ್ಯವಸ್ಥೆ ಮತ್ತು ವಾತಾವರಣವನ್ನು ಪರಿಶೀಲಿಸಿ ಪೊಲೀಸರು ಅನುಮತಿ ನೀಡುತ್ತಾರೆ. ಪರಿಸ್ಥಿತಿ ಸರಿಯಿಲ್ಲದಿದ್ದರೆ ಕಾರ್ಯಕ್ರಮ ಮುಂದೂಡುವಂತೆ ಸೂಚಿಸಲಾಗುತ್ತದೆ. ಇದೆಲ್ಲವೂ ಸ್ಥಳೀಯ ವಿದ್ಯಮಾನಗಳ ಮೇಲೆ ನಿರ್ಧಾರವಾಗುತ್ತದೆ ಎಂದು ಪ್ರಿಯಾಂಕ್ ಖರ್ಗೆ ಉತ್ತರಿಸಿದರು.
