ಬೆಂಗಳೂರು: ಮೈತ್ರಿ ಸರ್ಕಾರ ವಿಶ್ವಾಸ ಮತ ಸಾಬೀತು ಪಡಿಸುವಲ್ಲಿ ವಿಫಲರಾದ ಕುಮಾರಸ್ವಾಮಿ ಅವರು ಇಂದು ಕಾಂಗ್ರೆಸ್ ಪಕ್ಷದ ನಾಯಕರಾದ ರಾಮಲಿಂಗಾರೆಡ್ಡಿ ಅವರನ್ನ ಭೇಟಿ ಮಾಡಿದ್ದಾರೆ.
ಇಂದು ಬೆಳಗ್ಗೆ ಜೆಪಿ ನಗರ ನಿವಾಸದಿಂದ ಹೊರಟ ಕುಮಾರಸ್ವಾಮಿ ಅವರು, ನೇರ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಅಲ್ಲಿಯೇ ಉಪಹಾರ ಸೇವನೆ ಮಾಡಿದ ಎಚ್ಡಿಕೆ ಅವರು ಬಳಿಕ ಸುದೀರ್ಘ ಚರ್ಚೆ ನಡೆಸಿದರು.
ರಾಮಲಿಂಗಾರೆಡ್ಡಿ ಅವರೊಂದಿಗೆ ಜೊತೆ ಪ್ರತ್ಯೇಕ ಮಾತುಕತೆಗೆ ನಡೆಸಿದ್ದು, ಈ ಸಂದರ್ಭದಲ್ಲಿ ಬೆಂಗಳೂರು ಶಾಸಕರನ್ನು ಸೆಳೆಯುವ ಅಂತಿಮ ಪ್ರಯತ್ನ ನಡೆಸುವ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೈತ್ರಿ ಮುಂದುವರಿಸುವ ಕುರಿತು ಕೂಡ ಇದೇ ಸಂದರ್ಭದಲ್ಲಿ ಚರ್ಚೆ ನಡೆಸುವ ಮಾಹಿತಿ ಲಭಿಸಿದೆ.
ಸರ್ಕಾರ ಪತನದ ಬಳಿಕವೂ ರಾಮಲಿಂಗಾ ರೆಡ್ಡಿ ಅವರನ್ನ ಭೇಟಿ ಮಾಡಿರುವ ಎಚ್ಡಿಕೆ ಅವರ ನಡೆ ಕುತೂಹಲ ಮೂಡಿಸಿದ್ದು, ಮುಂಬೈ ನಲ್ಲಿರುವ ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಲು ಶತ ಪ್ರಯತ್ನ ನಡೆಸಿದ್ದಾರೆ. ಇದಕ್ಕೂ ಮುನ್ನ ಎಚ್ಡಿ ದೇವೇಗೌಡ ಅವರ ಜೊತೆ ಚರ್ಚೆ ನಡೆಸಿದ್ದಾರೆ.