ಮೈಸೂರು: ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಅಲ್ಪಾವಧಿ ಸರ್ಕಾರ. ಇದೊಂದು ಪ್ರಕೃತಿ ವಿರುದ್ಧವಾದ ಪ್ರಕ್ರಿಯೆಯಾಗಿದೆ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಮೈಸೂರಲ್ಲಿ ಮಾತನಾಡಿದ ಅವರು, ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಈ ಸರ್ಕಾರ ಇರುತ್ತಾ ಅನ್ನೋ ಅನುಮಾನ ಇದೆ. ಒಂದೊಂದು ಬಾರಿ ಎರಡೆರಡು ತಲೆ, ನಾಲ್ಕು ನಾಲ್ಕು ಕೈ ಇರುವ ಮಕ್ಕಳು ಹುಟ್ಟುತ್ತವೆ. ಅಂತಹ ಮಕ್ಕಳು ಬಹಳ ದಿನ ಬದುಕೋಲ್ಲ. ಈ ಸರ್ಕಾರದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಇನ್ನು ಮೂರು ತಿಂಗಳು ಮಾತ್ರ ಈ ಮೈತ್ರಿಯ ಆಯುಷ್ಯ ಅಂತ ಭವಿಷ್ಯ ನುಡಿದರು.
ನಾವೇನು ಆಪರೇಷನ್ ಕಮಲ ನಡೆಸೋಲ್ಲ. ಮೋದಿ ಅಭಿವೃದ್ಧಿ ಮೆಚ್ಚಿ ಬರುವವರನ್ನ ನಾವು ಸ್ವಾಗತ ಮಾಡುತ್ತೇವೆ. ಸಿದ್ದರಾಮಯ್ಯರನ್ನ ಕಾಂಗ್ರೆಸ್ ಯೂಸ್ ಮಾಡಿಕೊಳ್ಳುತ್ತಿದೇಯಾ ಅಂತ ಅವರನ್ನೆ ಕೇಳಿ ಎಂದರು.
ಈಗಲಾದರೂ ಸಿದ್ದರಾಮಯ್ಯ ತಮ್ಮ ಭಾಷೆ ನಡವಳಿಕೆ ಬದಲಾಯಿಸಿಕೊಳ್ಳಲಿ. ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಅವರು ಬೇರೆ ಪಕ್ಷದಲ್ಲಿದ್ದುಕೊಂಡು ವಾಗ್ದಾಳಿ ನಡೆಸಿದ್ದರು. ಆದರೆ ಜೆಡಿಎಸ್-ಕಾಂಗ್ರೆಸ್ ನಾಯಕರು ಯಾವಾಗಲೂ ಬೈದಾಡಿಕೊಂಡು ಈಗ ಒಂದಾದರೇ ಏನರ್ಥ ಎಂದು ಪ್ರಶ್ನಿಸಿದರು.