ಮಂಡ್ಯ: ಸ್ವಾಭಿಮಾನದ ಮಂತ್ರ ಜಪಿಸಿ ಮಂಡ್ಯ ಜನರ ಮನ ಗೆದ್ದಿದ್ದ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್-ಬಿಜೆಪಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿವೆ. ಆದರೆ ಸುಮಲತಾ ಯಾರ ಪ್ರಚಾರಕ್ಕೆ ತೆರಳದೇ ತಟಸ್ಥ ನಿಲುವು ತೋರಿದ್ದಾರೆ. ನೀವು ಬರದಿದ್ದರೂ ಪರವಾಗಿಲ್ಲ, ನಟರಾದ ಯಶ್ ಮತ್ತು ದರ್ಶನ್ ಅವರನ್ನು ಪ್ರಚಾರಕ್ಕೆ ಕಳಿಸುವಂತೆ ಪಕ್ಷಗಳು ದುಂಬಾಲು ಬಿದ್ದಿವೆ ಎನ್ನಲಾಗಿದೆ.
ಕೆ.ಆರ್. ಪೇಟೆ ವಿಧಾನಸಭೆಯ ಉಪ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಇದರ ಜೊತೆ ಜೊತೆಗೆ ಹೊಸ ಹೊಸ ತಿರುವು ಸಹ ಪಡೆದುಕೊಳ್ಳುತ್ತಿದೆ. ಬಿಜೆಪಿಯವರು ಸಿಎಂ ಬಿಎಸ್ ಯಡಿಯೂರಪ್ಪ ತವರು ಕ್ಷೇತ್ರ ಕೆಆರ್ ಪೇಟೆಯಲ್ಲಿ ಹೇಗಾದ್ರೂ ಮಾಡಿ ಕಮಲ ಅರಳಿಸಲು ಇನ್ನಿಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಇತ್ತ ಜೆಡಿಎಸ್ ಕ್ಷೇತ್ರವನ್ನು ಉಳಿಸಿಕೊಳ್ಳಲು ದಳಪತಿಗಳು ಸಮಾವೇಶಗಳನ್ನು ಮಾಡುತ್ತಿದ್ದಾರೆ. ಎರಡೂ ಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ಸಿದ್ಧಗೊಂಡಿದೆ.
ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿಯವರು ಸುಮಲತಾರಿಂದ ತಮ್ಮ ಪರ ಪ್ರಚಾರ ಮಾಡಿಸಬೇಕು. ಈ ಮೂಲಕ ಒಂದಷ್ಟು ವೋಟುಗಳನ್ನ ಸೆಳೆಯಬೇಕು ಎಂದು ಪ್ರಯತ್ನ ಪಟ್ಟಿದ್ದರು ಇದೀಗ ಬಿಜೆಪಿ ಜೋಡೆತ್ತುಗಳಿಗೆ ಗಾಳ ಹಾಕಲು ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.