ಕೊಪ್ಪಳ: ಟ್ರ್ಯಾಕ್ಟರ್ ಮೇಲೆ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ತಂದೆ ಇಬ್ಬರು ಮಕ್ಕಳು ಮೃತಪಟ್ಟ ಹೃದಯವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಂದೆ ಹಣಮಂತ, 4 ವರ್ಷದ ಮಗಳು ಪ್ರಿಯಾಂಕಾ ಮತ್ತು 2 ವರ್ಷದ ಮಗ ಬೀರಪ್ಪ ಮೃತ ದುರ್ದೈವಿಗಳಾಗಿದ್ದಾರೆ.
ಇಂದು ಮೃತ ಹಣಮಂತ ತಮ್ಮ ಮಕ್ಕಳೊಂದಿಗೆ ಹೊಲದಲ್ಲಿ ಬೆಳೆದಿದ್ದ ಸೂರ್ಯಕಾಂತಿ ಬೆಳೆಯನ್ನು ರಾಶಿ ಮಾಡಿ ಟ್ರ್ಯಾಕ್ಟರ್ ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಂಬದಿಂದ ವಿದ್ಯುತ್ ತಂತಿ ಏಕಾಏಕಿ ಇವರ ಮೇಲೆ ಬಿದ್ದಿದ್ದರಿಂದ ಸ್ಥಳದಲ್ಲೇ ಮೂವರ ಪ್ರಾಣ ಹೋಗಿದೆ. ವಿದ್ಯುತ್ ಕಂಬ ತುಂಬಾ ಹಳೆಯದಾಗಿದ್ದ ಕಾರಣ ದುರಂತ ಸಂಭವಿಸಿದೆ.
ಹಲವಾರು ಭಾರಿ ಮೌಖಿಕವಾಗಿ ವಿದ್ಯುತ್ ತಂತಿಗಳು ತೆರವುಗೊಳಿಸಿ ಹೊಸ ತಂತಿಗಳು ಹಾಕಿ ಎಂದು ಜೆಸ್ಕಾಂ ಇಲಾಖೆ ಮೃತ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಅಧಿಕಾರಿಗಳು ಕ್ಯಾರೇ ಎಂದಿರಲಿಲ್ಲ. ಇಂದು ಈ ಅವಘಡ ಸಂಭವಿಸಿದ್ದರಿಂದ ಕುಟುಂಬಸ್ಥರು ಜೆಸ್ಕಾಂ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.