ಕೊಪ್ಪಳ: ರಾಜ್ಯ ಸರ್ಕಾರ ತನ್ನ 5 ಗ್ಯಾರಂಟಿ ಯೋಜನೆ (Congress Guarantee Scheme) ಜಾರಿಗೆ ಹಣ ಹೊಂದಿಸಲು ಹರಸಾಹಸ ಮಾಡುತ್ತಿದೆ. ಅದಕ್ಕಾಗಿ ಹತ್ತಾರು ಇಲಾಖೆಗೆ ದಂಡದ ಟಾರ್ಗೆಟ್ ನೀಡಿ, ಹಣ ಸಂಗ್ರಹಿಸಲು ಸರ್ಕಾರ ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ನಡುವೆ ಕೊಪ್ಪಳದ ಅಬಕಾರಿ ಅಧಿಕಾರಿಗಳ (Excise Officer) ಕಳ್ಳಾಟದಿಂದ ಸರ್ಕಾರದ ಬೊಕ್ಕಸಕ್ಕೆ ಕೊಕ್ಕೆ ಬಿದ್ದಂತಾಗಿದೆ.
ಸರ್ಕಾರದ ಮೌಖಿಕ ಆದೇಶದ ಗುರಾಣಿ ಹಿಡಿದ ಅಬಕಾರಿ ಅಧಿಕಾರಿಗಳು, ಬಾರ್ಗಳಿಗೆ ದಂಡ ಹಾಕುತ್ತಿದ್ದಾರೆ. ಆದ್ರೆ ಹಾಕಿದ ದಂಡದ ಅರ್ಧ ಹಣ ಸೋರಿಕೆ ಆಗುತ್ತಿರುವ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮೊಟ್ಟೆ ವಿತರಣೆ ಬಗ್ಗೆ ನಿಗಾವಹಿಸಲು ಸ್ಪೆಷಲ್ ಟಾಸ್ಕ್ ಫೋರ್ಸ್ ರಚನೆ ಮಾಡ್ತೀವಿ – ಲಕ್ಷ್ಮಿ ಹೆಬ್ಬಾಳ್ಕರ್
ಕೊಪ್ಪಳ ಅಬಕಾರಿ ಉಪ ಆಯುಕ್ತರ ಕಚೇರಿಯಿಂದ ಅಬಕಾರಿ ನಿಯಮ ಉಲ್ಲಂಘನೆ ಆರೋಪದಡಿ ವಿವಿಧ ಬಾರ್ ಗಳಿಗೆ ದಂಡ ವಿಧಿಸಲಾಗಿದೆ. ಆದ್ರೆ ಒಂದೇ ಪ್ರಕರಣಕ್ಕೆ ಎರಡೆರಡು ಬಾರಿ ಆದೇಶ ಮಾಡಲಾಗಿದ್ದು, ಮೊದಲು ಹೆಚ್ಚು ದಂಡ ಹಾಕಿ ನಂತರ ಕಡಿಮೆ ಮಾಡಲಾಗಿದೆ. ದಂಡ ಶುಲ್ಕ ಕಡಿಮೆ ಮಾಡಿ ಭಾರೀ ಭ್ರಷ್ಟಾಚಾರ ನಡೆದಿರುವ ಆರೋಪ ಕೇಳಿ ಬಂದಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸೇರಬೇಕಿದ್ದ ಹಣ ಅಬಕಾರಿ ಇಲಾಖೆ ಅಧಿಕಾರಿಗಳ ಮನೆ ಸೇರುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಒಂದೇ ಪ್ರಕರಣಕ್ಕೆ ಒಮ್ಮೆ ಹೆಚ್ಚು ದಂಡ ವಿಧಿಸಿ, ಅದೇ ಪ್ರಕರಣಕ್ಕೆ ದಂಡ ಕಡಿಮೆ ಮಾಡಿ, ಆದೇಶಿಸಿರುವ ದಾಖಲೆಗಳು ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿವೆ. ನಿಯಮದಂತೆ ಒಮ್ಮೆ ಮಾಡಿದ ಆದೇಶವನ್ನ ಮತ್ತೇ ಬದಲಾಯಿಸಲು ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ನಡೆ ಸಾಕಷ್ಟು ಅನುಮಾನ ಮೂಡಿಸಿದೆ. ಇದನ್ನೂ ಓದಿ: KMDC ಸಾಲ ವಸೂಲಾತಿ 50% ಪ್ರಗತಿ ತೋರಿಸಲು ಸಚಿವ ಜಮೀರ್ ಟಾರ್ಗೆಟ್!
ಪ್ರಕರಣಗಳ ಮಾಹಿತಿ:
ಕಳೆದ 2022ರ ನವೆಂಬರ್ 29ರಂದು ಗುನ್ನೆ ನಂ.18ರಲ್ಲಿ ಕುಷ್ಟಗಿ ವಲಯ ವ್ಯಾಪ್ತಿಯಲ್ಲಿ ರಾಜಶ್ವೇರಿ ಎಂಬವರ ಹೆಸರಿನ ಸಿಎಲ್ 7 ಬಾರ್ಗೆ ಗ್ರಾಹಕರಿಗೆ ರಶೀದಿ ನೀಡಿಲ್ಲ ಎಂಬ ಆರೋಪದಡಿ ಮೊದಲು 40 ಸಾವಿರ ರೂ. ದಂಡ ಹಾಕಿ, ನಂತರ 12 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಗುನ್ನೆ ನಂ.24ಕ್ಕೆ ಸಂಬಂಧಿಸಿದಂತೆ ಕುಕನೂರು ತಾಲೂಕು ತಳಕಲ್ ಗ್ರಾಮದ ನೀಲಮ್ಮ ಎಂಬುವರ ಹೆಸರಿನ ಸಿಎಲ್ 2 ಬಾರ್ಗೆ ಗ್ರಾಹಕರಿಗೆ ರಶೀದಿ ನೀಡಿಲ್ಲ ಎಂಬ ಆರೋಪದಡಿ ಮೊದಲು 40 ಸಾವಿರ ರೂ. ದಂಡ ಹಾಕಿ, ನಂತರ 15 ಸಾವಿರ ರೂ.ಗೆ ಹಾಗೂ ಗುನ್ನೆ ನಂ. 34ರಲ್ಲಿ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ ಗ್ರಾಮದ ಸರ್ಕಾರಿ ಸ್ವಾಮ್ಯದ ಎಂಎಸ್ ಐಲ್ 11ಸಿ ಮದ್ಯ ಮಾರಾಟ ಮಳಿಗೆಗೆ ಮೊದಲು 30 ಸಾವಿರ ರೂ. ದಂಡ ಹಾಕಿ, ನಂತರ 10 ಸಾವಿರ ರೂ.ಗೆ ಇಳಿಕೆ ಮಾಡಲಾಗಿದೆ. ಇದರಂತೆ ಸಾಕಷ್ಟು ಪ್ರಕರಣದಲ್ಲಿ ಅಧಿಕಾರಿಗಳು ಇಂಥ ತಪ್ಪು ಮಾಡಿದ್ದಾರೆ ಅನ್ನೋದು ಮೇಲ್ನೋಟಕ್ಕೆ ಕಂಡುಬಂದಿದೆ.
Web Stories