ಬೆಂಗಳೂರು: ರಾಜ್ಯದ ಡಬಲ್ ಇಂಜಿನ್ ಬಿಜೆಪಿ ಸರ್ಕಾರವು ಒತ್ತುವರಿ ತೆರವು ವಿಚಾರದಲ್ಲಿ ಡಬಲ್ ಗೇಮ್ ಆಪರೇಷನ್ ಕೈಗೊಂಡಿದೆ. ಕಾರ್ಯಾಚರಣೆ ವೇಳೆ ದೊಡ್ಡ ದೊಡ್ಡವರ ಲಾಬಿಗೆ ಮಣಿದಿರೋದು ಸ್ಪಷ್ಟವಾಗಿದೆ. ಇದಕ್ಕೆ ಉದಾಹರಣೆ ಎನ್ನುವಂತೆ ಕೋಳಿವಾಡ ಸಮಿತಿ ಮಂಡಿಸಿದ್ದ ವರದಿಯಲ್ಲಿ ಬಾಗ್ಮನೆ ಟೆಕ್ಪಾರ್ಕ್(Bagmane Tech Park) ಒತ್ತುವರಿ ಜಾಗ ಎನ್ನುವುದು ಸ್ಪಷ್ಟವಾಗಿದೆ.
ಮಹದೇವಪುರದ ಬಾಗ್ಮನೆ ಟೆಕ್ಪಾರ್ಕ್ ಒತ್ತುವರಿ ಸಂಬಂಧ ಪಬ್ಲಿಕ್ ಟಿವಿ(Public TV) ಇನ್ನಷ್ಟು ದಾಖಲೆಗಳನ್ನು ಹೊರತೆಗೆದಿದೆ. ಮಾಜಿ ಸ್ಪೀಕರ್ ಕೆಬಿ ಕೋಳಿವಾಡ(K. B. Koliwad) ನೇತೃತ್ವದ ಸಮಿತಿ 2017ರಲ್ಲಿ ಸದನದಲ್ಲಿ ಮಂಡಿಸಿದ ವರದಿಯಲ್ಲಿ ಬಾಗ್ಮನೆ ಟೆಕ್ಪಾರ್ಕ್ ಅಕ್ರಮದ ಬಗ್ಗೆ ಉಲ್ಲೇಖವಾಗಿದೆ.
ವರದಿಯಲ್ಲಿ ಏನಿದೆ?: ಬಾಗ್ಮನೆಯಿಂದ ಎರಡು ಕಡೆ 13.03 ಗುಂಟೆ ಭೂಮಿ ಒತ್ತುವರಿ ಮಾಡಲಾಗಿದೆ. ಕೆ.ಆರ್.ಪುರಂನ ಬೈರಸಂದ್ರದ ಸರ್ವೇ ನಂ.5ರಲ್ಲಿ ಒತ್ತುವರಿ ಆಗಿದೆ. ಭೈರಸಂದ್ರ ಕೆರೆಯ 14.24 ಎಕರೆಯಲ್ಲಿ 9.14 ಗುಂಟೆ ಹಾಗೂ ಕಗ್ಗದಾಸಪುರದ ಸರ್ವೇ ನಂ. 141ರಲ್ಲಿ 3.89 ಗುಂಟೆ ಒತ್ತುವರಿ ಆಗಿದೆ. ಒತ್ತುವರಿ ಜಾಗದಲ್ಲಿ ಟೆಕ್ಪಾರ್ಕ್ ಕಚೇರಿ, ಕಾರು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಕೋಳಿವಾಡ ಸಮಿತಿಯ ವರದಿಯು ತಿಳಿಸಿದೆ. ಇದನ್ನೂ ಓದಿ: ವಿದ್ಯುತ್ ಸಂಪರ್ಕ ಕಡಿತ – ವಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿದ್ದ ಮೂವರು ಒಂದೇ ಸಮಯದಲ್ಲಿ ಸಾವು
ಈ ವರದಿಯನ್ನು ಬಾಗ್ಮನೆ ಟೆಕ್ಪಾರ್ಕ್ ಒಪ್ಪಿಕೊಳ್ಳಲು ಸಿದ್ಧವಿಲ್ಲ. 2002ರಲ್ಲೇ ವಿಲ್ಲಾ, ಲೇಔಟ್ ಡೆವಲಪ್ ಆಗಿದೆ. ಗರುಡಾಚಾರ್ ಪಾಳ್ಯದ ಕೆರೆಯಿಂದಲೇ ಸಮಸ್ಯೆ ಆಗಿದೆ. ಕೆರೆ ಅಭಿವೃದ್ಧಿಯ ವೇಳೆ ಹೈಫ್ಲಡ್ ಲೆವೆಲ್ ಚೆಕ್ ಮಾಡಿಲ್ಲ. 2.4 ಮೀಟರ್ ರಾಜ ನಾಲೆ ಇದೆ. ನಾವು ಬ್ಲಾಕ್ ಮಾಡಿದ್ದೇವೆ. ಈ ರಾಜನಾಲೆ ಓಪನ್ ಮಾಡಿದರೆ ಟೆಕ್ಪಾರ್ಕ್ಗೆ ಕೆರೆ ನೀರು ನುಗ್ಗುತ್ತದೆ. ಕಂದಾಯ ಇಲಾಖೆ ಸರಿಯಾಗಿ ಸರ್ವೇ ಮಾಡಿಲ್ಲ. ಕೆರೆ ಅಭಿವೃದ್ಧಿ ಪ್ರಾಧಿಕಾರದಿಂದಲೇ ತಪ್ಪಾಗಿದೆ ಎಂದು ವಾದಿಸಿದೆ.
ಈ ಹಿನ್ನೆಲೆಯಲ್ಲಿ ಲೋಕಾಯುಕ್ತದ ಮೊರೆ ಹೋಗಿದೆ. ಈ ಸಂದರ್ಭದಲ್ಲಿ ಬಾಗ್ಮನೆ ಟೆಕ್ಪಾರ್ಕ್ ಕಾನೂನು ಪಾಲನೆ ಮಾಡಬೇಕು. ನೀವೇ ಸರಿಯಾದ ಕ್ರಮದಲ್ಲಿ ತೆರವು ಮಾಡಿಕೊಡಿ. ಬಿಬಿಎಂಪಿ ಕಾರ್ಯಾಚರಣೆಗೆ ಅನುವು ಮಾಡಿಕೊಡಿ. ಮೂರು ವಾರಗಳ ನಂತರ ಮತ್ತೊಮ್ಮೆ ವಿಚಾರಣೆ ಮಾಡಿ ಎಂದು ಸೆ.12ರ ಲೋಕಾಯುಕ್ತ ಆದೇಶದಲ್ಲಿ ತಿಳಿಸಿದೆ. ಇದನ್ನೂ ಓದಿ: ಬೆಟ್ಟ ಕುರುಬ ಸೇರಿದಂತೆ ಒಟ್ಟು 12 ಜಾತಿಗಳು ಎಸ್ಟಿ ವರ್ಗಕ್ಕೆ ಸೇರ್ಪಡೆ: ಮೋದಿಗೆ ಬಿಎಸ್ವೈ ಅಭಿನಂದನೆ
ಬಿಬಿಎಂಪಿ ಮೇಲೆಯೂ ಪ್ರಭಾವ ಬೀರಲು ಯತ್ನಿಸಿದೆ. ಮರುಸರ್ವೇಗೆ ಒತ್ತಾಯಿಸುತ್ತಿದೆ. ಇಷ್ಟಕ್ಕೂ ಲೋಕಾಯುಕ್ತರ ಆದೇಶವನ್ನೇ ಬಿಬಿಎಂಪಿ ತಪ್ಪಾಗಿ ಅರ್ಥೈಸಿಕೊಂಡಿದೆ. ಲೋಕಾಯುಕ್ತ ಎಲ್ಲೂ ಕೂಡ 3 ವಾರ ಒತ್ತುವರಿ ತೆರವನ್ನು ಮುಂದೂಡುವಂತೆ ಸೂಚಿಸಿಯೇ ಇಲ್ಲ. ಇನ್ನು, ಬಾಗ್ಮನೆಗೆ ರಿಯಾಯಿತಿ ವಿಚಾರ ಸದನದಲ್ಲಿಯೂ ಪ್ರತಿಧ್ವನಿಸಿದೆ. ಆದರೆ, ಸಿಎಂ ಮಾತ್ರ ಎಂದಿನಂತೆ, ಯಾರು ಎಷ್ಟೇ ದೊಡ್ಡವರಿದರೂ ಮುಲಾಜಿಲ್ದೇ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಮಾತನ್ನೇ ಪುನರುಚ್ಚರಿಸಿದ್ದಾರೆ.