ಕೋಲಾರ: ಜಿಲ್ಲೆಯ ಮಾಲೂರು ಸಬ್ ರಿಜಿಸ್ಟರ್ ಕಚೇರಿಯಲ್ಲಿ ಲಂಚ ನೀಡಿದರೆ ಮಾತ್ರ ನಿಮ್ಮ ಕೆಲಸಗಳು ನಡೆಯುತ್ತವೆ ಎಂಬ ಆರೋಪಗಳು ಕೇಳಿ ಬಂದಿವೆ.
ಇಲ್ಲಿನ ಸರ್ಕಾರಿ ಕಚೇರಿಯೊಳಗೆ ಖಾಸಗಿ ವ್ಯಕ್ತಿಗಳು ಪತ್ಯೇಕ ಆಸನದ ವ್ಯವಸ್ಥೆ ಮಾಡಿಕೊಂಡು ದರ್ಬಾರ್ ನಡೆಸುತ್ತಿದ್ದಾರೆ. ಇದರ ಜೊತೆಗೆ ಕಚೇರಿಯಿಂದ ಹೊರಗೆ ಸಾರ್ವಜನಿಕರೊಂದಿಗೆ ಮಧ್ಯವರ್ತಿಗಳು ಅಧಿಕಾರಿಗಳ ಮುಂದೆಯೇ ವ್ಯಾಪಾರ ಮಾಡುತ್ತಾರೆ.
- Advertisement 2
- Advertisement 3
ಹೌದು, ಇಲ್ಲಿ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ದರ್ಬಾರ್ ಮಿತಿಮೀರಿದೆ. ಕಚೇರಿಯಲ್ಲಿ ದಲ್ಲಾಳಿಗಳಿಗೆ ಟೇಬಲ್ ವ್ಯವಸ್ಥೆ ಮಾಡಿಕೊಟ್ಟು ಸಾರ್ವಜನಿಕರಿಂದ ನೇರವಾಗಿ ಅಧಿಕಾರಿಗಳೇ ಸುಲಿಗೆ ಮಾಡಿಸುತ್ತಿದ್ದಾರೆ. ಇದನ್ನು ತಿಳಿಯದ ಸಾರ್ವಜನಿಕರು, ಮಧ್ಯವರ್ತಿಗಳನ್ನೇ ಸರ್ಕಾರಿ ನೌಕರರೆಂದು ಭಾವಿಸಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಕಚೇರಿಯ ಉಪನೊಂದಣಾಧಿಕಾರಿ ಪದ್ಮಾವತಿ ಸಹ ನಿಗದಿಗಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.
- Advertisement 4
ಈ ಮಧ್ಯವರ್ತಿಗಳಿಗೆ ಹಣ ಕೊಡಲಿಲ್ಲ ಅಂದರೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಜನರನ್ನು ಪದೇ-ಪದೇ ಕಚೇರಿಗೆ ಅಲೆಯುವಂತೆ ಮಾಡುತ್ತಾರೆ. ಹೆಚ್ಚಿನ ಹಣ ನೀಡಿದರೆ ಕಣ್ಮುಚ್ಚಿ ಸಹಿ ಹಾಕುವುದು ಇಲ್ಲಿ ಹವ್ಯಾಸವಾಗಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ. ವಿಷಯ ತಿಳಿದ ಮಾಧ್ಯಮಗಳು ಕಚೇರಿಗೆ ತೆರಳಿದರೆ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದ ಮಧ್ಯವರ್ತಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ಖಾಸಗಿ ವ್ಯಕ್ತಿಗಳು ಕಚೇರಿಯಲ್ಲಿ ಕೆಲಸ ಮಾಡುತ್ತಿರೋದನ್ನು ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಒಟ್ಟಿನಲ್ಲಿ ನಿವೇಶನ, ಮದುವೆ ನೊಂದಣಿಗೆ ಎಂದು ಬರುವ ಅಮಾಯಕರನ್ನು ಯಾಮಾರಿಸಿ ಪರ್ಸಂಟೇಜ್ ಫಿಕ್ಸ್ ಮಾಡಿ ಸಾರ್ವಜನಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.