ಕೋಲಾರ: ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಿಗೆ ಬಿಜೆಪಿ ದೇಶದ್ರೋಹ ಪಟ್ಟ ಕಟ್ಟಿದೆ. ಅದು ಬಿಜೆಪಿಯ ನಂಬಿಕೆ ಮತ್ತು ಸಿದ್ದಾಂತ. ಅವರ ಕೈಯಲ್ಲಿ ಅಧಿಕಾರಿವಿದೆ ಹಾಗಾಗಿ ಅವರು ಇದೆಲ್ಲಾ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಆರೋಪಿಸಿದ್ದಾರೆ.
ಕೋಲಾರದ ಶ್ರೀನಿವಾಸಪುರದ ಗೌನಿಪಲ್ಲಿಯಲ್ಲಿಯಲ್ಲಿ ವೇಣುಗೋಪಾಲಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರು ಯಾರ ಪರ ಇದ್ದವರು, ಅಂತಹವರ ವಿರುದ್ಧ ಹೋರಾಟ ಮಾಡಿದವರಿಗೆ ದೇಶ ದ್ರೋಹದ ಪಟ್ಟಿ ಕಟ್ಟಿದವರು ಬಿಜೆಪಿಯವರು ಎಂದು ವಾಗ್ದಾಳಿ ಮಾಡಿದರು.
ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಪ್ರಾಣ ಕಳೆದುಕೊಂಡವರು ಟಿಪ್ಪು ಸುಲ್ತಾನ್. ಬಿಜೆಪಿ ಅವರು ಇತಿಹಾಸ ತಿರುಚಲು ಹೊರಟಿದ್ದಾರೆ. ಅವರ ಕೈಯಲ್ಲಿ ಅಧಿಕಾರವಿದೆ ಅವರು ಮಾತನಾಡುತ್ತಾ ಇದ್ದರೆ. ವೈಯಕ್ತಿಕ ಆರೋಪಗಳು ಮಾಡುವುದು ಸರಿಯಲ್ಲ, ನಮಗೆ ಈ ವಿಚಾರವಾಗಿ ಸಹಮತ ಇಲ್ಲ. ಆದರೆ ಕೆಲವರು ಅವರೇನೇ ಮಾಡಿದರು ಸರಿ ಎನ್ನುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರ ನೂರು ದಿನ ಪೂರೈಸಿರುವುದು ಸಮಾಧಾನ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಮೇಶ್ ಕುಮಾರ್, ಸಮಾಧಾನ ಅವರಿಗೂ ಇಲ್ಲ, ನಮಗೂ ಇಲ್ಲ. ಇದೇ ವೇಳೆ ಸಿಎಂ ಯಡಿಯೂರಪ್ಪ ಆಡಿಯೋ ವಿಚಾರವಾಗಿ ಮಾತನಾಡಲು ನಿರಾಕರಿಸಿದ ಅವರು, ಜನಸೇನಾ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಅಜೆಂಡಾ ಜಾತ್ಯತೀತವಾಗಿದ್ದು ಅದನ್ನು ಸ್ವಾಗತಿಸುತ್ತೇನೆ. ಪವನ್ ಕಲ್ಯಾಣ್ ಒಳ್ಳೆಯ ಆದರ್ಶಗಳನ್ನು ಹೊಂದಿರುವ ವ್ಯಕ್ತಿ, ವಯಸ್ಸಿನಲ್ಲಿ ದೊಡ್ಡವನಾದ ಕಾರಣ ಆಶೀರ್ವಾದ ಮಾಡಿದ್ದೇನೆ ಎಂದು ತಿಳಿಸಿದರು.