ಕೋಲಾರ: ಇಷ್ಟು ವರ್ಷದವರೆಗೂ ಯಾವ ಮುಖ್ಯಮಂತ್ರಿಗಳು ರೈತರ ಸಾಲವನ್ನು ಮನ್ನಾ ಮಾಡಿರಲಿಲ್ಲ. ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆಯನ್ನೂ ಮಾಡುವ ಗಂಡಸ್ತನವನ್ನು ಹೊಂದಿರಲಿಲ್ಲ. ಆದರೆ ನಮ್ಮ ಸಿಎಂ ರೈತರ ಸಾಲಮನ್ನಾ ಹಾಗೂ ಜಿಲ್ಲೆಗೆ ನಿರ್ಧಿಷ್ಟ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಸಿದ್ದರಾಮಯ್ಯ ಅವರನ್ನು ಹಾಡಿ ಹೊಗಳಿದ್ದಾರೆ.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಮನವೊಲಿಕೆ ಹಾಗೂ ಹೋರಾಟಗಾರರ ಸಭೆಯಲ್ಲಿ ರಮೇಶ್ ಕುಮಾರ್ ಮಾತನಾಡಿ ಸರ್ಕಾರದ ಸಾಧನೆಯನ್ನು ವಿವರಿಸಿದರು.
20 ರಂದು ಕೋಲಾರ ಜಿಲ್ಲೆಗೆ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನಲೆ ನಗರದ ಪ್ರವಾಸಿ ಮಂದಿರದಲ್ಲಿ ರಮೇಶ್ ಕುಮಾರ್ ನೇತೃತ್ವದಲ್ಲಿ ಹೋರಾಟಗಾರರ ಮನವೊಲಿಸುವ ಸಭೆ ಯಶಸ್ವಿಯಾಯಿತು. ಅಲ್ಲದೆ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಯಾವುದೇ ಅಡೆತಡೆಗಳನ್ನು ಮಾಡದಂತೆ ಮನವಿ ಮಾಡಿದರು. ಇನ್ನೂ 11 ಜನ ನೀರಾವರಿ ಹೋರಾಟಗಾರರ ಮೇಲಿನ ಪ್ರಕರಣಗಳನ್ನ ಹಿಂಪಡೆಯುವ ಕುರಿತು ಸರ್ಕಾರದ ಗಮನ ಸೆಳೆಯುವ ಭರವಸೆಯನ್ನು ನೀಡಿದರು.
ಕೆಜೆ ಜಾರ್ಜ್ ಗಣಪತಿ ಪ್ರಕರಣದಲ್ಲಿ ಜಾರ್ಜ್ ರಾಜೀನಾಮೆ ನೀಡಬೇಕೆಂಬ ಬಿಜೆಪಿ ನಾಯಕರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಗಣಪತಿ ವಿಸರ್ಜನೆಯಾಗಿದೆ ಎಂದು ಹೇಳಿ ವ್ಯಂಗ್ಯವಾಡಿದರು. ಅಲ್ಲದೆ ಆರೋಪ ಸಾಭೀತಾದ ತಕ್ಷಣ ರಾಜೀನಾಮೆ ನೀಡುವಂತೆ ಯಾವ ಸುಪ್ರಿಂಕೋರ್ಟ್ ಆದೇಶ ಮಾಡಿಲ್ಲ. ಜೊತೆಗೆ ರಾಜೀನಾಮೆಗೆ ಆಗ್ರಹಿಸುವವರು ಸುಪ್ರಿಂಕೋರ್ಟ್ ಆದೇಶವನ್ನು ಮೊದಲು ಸರಿಯಾಗಿ ಓದಲಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.
ವೈಚಾರಿಕ ಅಭಿಪ್ರಾಯ ಭೇದ ವಿಕಾರ ರೂಪಕ್ಕೆ ತಾಳದೆ ಗೌರವಯುತವಾಗಿ ನಡೆದುಕೊಳ್ಳಬೇಕು ಹೀಗೆ ನಡೆದುಕೊಂಡರೆ ಮಾತ್ರ ನಾಯಕರಾಗಿ ದೇಶದ ಜನತೆಗೆ ಮಾದರಿಯಾಗಿರಲು ಸಾಧ್ಯವೆಂದು ರಮೇಶ್ ಕುಮಾರ್ ಹೇಳಿದರು.