ಮಡಿಕೇರಿ: ಪ್ರೀತಿಗೆ ಕುಟುಂಬಸ್ಥರು ವಿರೋಧಿಸಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡ ಯುವ ಪ್ರೇಮಿಗಳು ಪ್ರೇಮಿಗಳ ದಿನವಾದ ಇಂದು ಆಹ್ಮಹತ್ಯೆಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹಾರಂಗಿ ಜಲಾಶಯದಲ್ಲಿ ನಡೆದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಯಮಗುಂಬಾ ಗ್ರಾಮದ ಸಿಂಧೂಶ್ರೀ (19) ಮತ್ತು ಪಟ್ಟೆಗಾಲ ಗ್ರಾಮದ ಯುವಕ ಸಚಿನ್ (25) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಸಿಂಧೂಶ್ರೀ ಹಾಗೂ ಸಚಿನ್ ಸುಮಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇವರ ವಿವಾಹಕ್ಕೆ ಇಬ್ಬರ ಕುಟುಂಬದಲ್ಲಿ ಸಮ್ಮತಿ ಇರಲಿಲ್ಲ. ಅಷ್ಟೇ ಅಲ್ಲದೇ ಸಿಂಧೂಶ್ರೀಗೆ ಬೇರೆ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ.
ಹುಣಸೂರಿನ ವಾಲ್ಮೀಕಿ ಭವನದಲ್ಲಿ ಭಾನುವಾರ ಸಿಂಧೂಶ್ರೀ ಮದುವೆ ಮಾಡಲು ಕುಟುಂಬಸ್ಥರು ಎಲ್ಲಾ ರೀತಿಯ ತಯಾರಿ ನಡಸಿದ್ದರು. ಆದರೆ ಯುವ ಪ್ರೇಮಿಗಳು ಗುರುವಾರ ಮಾತನಾಡಿಕೊಂಡು ಹುಣಸೂರಿನಿಂದ ಬೈಕ್ನಲ್ಲಿ ಹಾರಂಗಿ ಜಲಾಶಯಕ್ಕೆ ಬಂದಿದ್ದರು. ಕೆಲ ಕಾಲ ಹಾರಂಗಿ ಸುತ್ತಮುತ್ತಲಿನ ಪ್ರದೇಶವನ್ನು ವಿಕ್ಷಣೆ ಮಾಡಿದ್ದ ಪ್ರೇಮಿಗಳು, ಮಧ್ಯಾಹ್ನ ಹಾರಂಗಿ ಜಲಾಶಯದ ನದಿ ಸಮೀಪಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಮೃತದೇಹಕ್ಕೆ ಹುಡುಕಾಟ ನಡೆಸಿದರು. ಸುಮಾರು ಒಂದು ಗಂಟೆ ಕಾರ್ಯಾಚರಣೆ ಬಳಿಕ ಪ್ರೇಮಿಗಳ ಮೃತ ದೇಹವನ್ನು ಅಣ್ಣೆಕಟ್ಟಿನಿಂದ ಹೋರಕ್ಕೆ ತೆಗೆದಿದ್ದಾರೆ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.