ನಟ ಸುದೀಪ್ (Sudeep) ಇಂದು ಬಿಜೆಪಿಗೆ (BJP) ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ( Basavaraja Bommai) ನೇತೃತ್ವದಲ್ಲಿ ಅವರು ಪಕ್ಷವನ್ನು ಸೇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸುದೀಪ್ ಅವರ ಆಪ್ತರ ಪ್ರಕಾರ ಅಧಿಕೃತವಾಗಿ ಬಿಜೆಪಿಗೆ ಸೇರದೆ ಸ್ಟಾರ್ ಪ್ರಚಾರಕರಾಗಿ (Star Campaigner) ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಈಗಾಗಲೇ ಸುದೀಪ್ ತಾವು ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಎಲ್ಲ ಪಕ್ಷಗಳಲ್ಲೂ ಅವರ ಆಪ್ತರು ಇರುವುದರಿಂದ ಒಂದು ಪಕ್ಷವನ್ನು ಬೆಂಬಲಿಸುವುದಿಲ್ಲ ಎನ್ನುವ ಮಾತನ್ನು ಪದೇ ಪದೇ ಆಡುತ್ತಾ ಬಂದಿದ್ದಾರೆ. ಆ ಮಾತನ್ನು ಅವರು ಉಳಿಸಿಕೊಳ್ಳುತ್ತಾರೆ ಎನ್ನುವುದು ಆಪ್ತರ ಮಾತು. ಬಿಜೆಪಿ ಪಕ್ಷದಲ್ಲಿ ಸುದೀಪ್ ಅವರ ಹಲವಾರು ಸ್ನೇಹಿತರು ಇದ್ದಾರೆ. ಈ ಕಾರಣಕ್ಕಾಗಿ ಬೆಂಬಲಿಸಬಹುದು ಎನ್ನುವುದು ಆಪ್ತರ ಅನಿಸಿಕೆ. ಇದನ್ನೂ ಓದಿ: ಕಿಸ್ಸಿಂಗ್ ಪ್ರಕರಣ: 16 ವರ್ಷಗಳ ನಂತರ ಶಿಲ್ಪಾ ಶೆಟ್ಟಿಗೆ ಬಿಗ್ ರಿಲೀಫ್
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ರಾಜುಗೌಡ, ‘ಸುದೀಪ್ ನನ್ನ ಸಹೋದರನಿದ್ದಂತೆ. ಅವರೊಂದಿಗೆ ಸಾಕಷ್ಟು ಒಡನಾಟ ಹೊಂದಿದ್ದೇನೆ. ಎರಡ್ಮೂರು ಬಾರಿ ನಾನು ಕೂಡ ಬಿಜೆಪಿಗೆ ಸೇರುವಂತೆ ಅವರೊಂದಿಗೆ ಮಾತನಾಡಿದ್ದೇನೆ. ಆದರೆ, ಅವರು ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತ ಪಡಿಸಿರಲಿಲ್ಲ. ಇಂದು ಮಾಧ್ಯಮಗಳಲ್ಲಿ ಸುದ್ದಿ ನೋಡಿ, ನಾನೇ ಅವರಿಗೆ ಬೆಳಗ್ಗೆ ಫೋನ್ ಮಾಡಿದ್ದೆ. ಒಂದು ರೀತಿಯಲ್ಲಿ ಸಸ್ಪನ್ಸ್ ಸಿನಿಮಾದಂತೆ ಆ ವಿಷಯವನ್ನು ಇಟ್ಟಿದ್ದಾರೆ’ ಎಂದಿದ್ದಾರೆ.
ಈ ಹಿಂದೆ ರಮ್ಯಾ ಮೂಲಕ ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ಕೂಡ ನಡೆದಿತ್ತು. ಸುದೀಪ್ ಮನೆಗೆ ಸ್ವತಃ ಡಿ.ಕೆ. ಶಿವಕುಮಾರ್ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಅಲ್ಲದೇ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೂಡ ಕಾಂಟ್ಯಾಕ್ಟ್ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಈ ಎಲ್ಲ ಸಂದರ್ಭದಲ್ಲೂ ಕಿಚ್ಚ ರಾಜಕೀಯ ಪ್ರವೇಶ ಮಾಡಿಲ್ಲ ಎಂದೇ ಹೇಳಿದ್ದರು. ಆ ಮಾತನ್ನು ಇವತ್ತು ಉಳಿಸಿಕೊಳ್ಳುತ್ತಾರಾ ಕಾದು ನೋಡಬೇಕು.