ತಿರುವನಂತಪುರಂ: ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇರಳ ಸಚಿವ ಅಹಮ್ಮದ್ ದೇವರಕೋವಿಲ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದಾರೆ. ಈ ಮೂಲಕ ತ್ರಿವರ್ಣ ಧ್ವಜಕ್ಕೆ ಅಗೌರವ ತೋರಿದ್ದು, ಅವರು ರಾಜೀನಾಮೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.
ಸಿಪಿಐ(ಎಂ) ನೇತೃತ್ವದ ಎಲ್ಡಿಎಫ್ನ ಮಿತ್ರಪಕ್ಷವಾದ ಇಂಡಿಯನ್ ನ್ಯಾಷನಲ್ ಲೀಗ್(ಐಎನ್ಎಲ್) ನಾಮನಿರ್ದೇಶಿತ ದೇವರಕೋವಿಲ್ ಜಿಲ್ಲಾ ಕೇಂದ್ರದಲ್ಲಿ ನಡೆದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಬುಧವಾರ ಬೆಳಗ್ಗೆ ಮುನ್ಸಿಪಲ್ ಸ್ಟೇಡಿಯಂನಲ್ಲಿ ಧ್ವಜಾರೋಹಣ ನಡೆಸುವ ಸಂದರ್ಭದಲ್ಲಿ ರಾಷ್ಟ್ರಧ್ವಜ ತಲೆಕೆಳಗಾದ ಘಟನೆ ನಡೆದಿದೆ. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ಬೇಡ: ಬುದ್ಧದೇವ್ ಭಟ್ಟಾಚಾರ್ಜಿ
ಧ್ವಜಾರೋಹಣದ ಸಂದರ್ಭ ಹಾಜರಿದ್ದ ಸಚಿವರು, ಪೊಲೀಸ್ ಅಧಿಕಾರಿಗಳು ಹಾಗೂ ಇತರ ಗಣ್ಯರಲ್ಲಿ ಯಾರೊಬ್ಬರೂ ದೋಷವನ್ನು ಗಮನಿಸಿರಲಿಲ್ಲ. ಸಚಿವರು ಭಾಷಣ ಮುಗಿಸಿದ ಬಳಿಕ ಅಲ್ಲಿ ನೆರೆದಿದ್ದ ಕೆಲ ಮಾಧ್ಯಮದವರು ದೋಷವನ್ನು ಎತ್ತಿ ತೋರಿಸಿದ್ದಾರೆ. ಕೂಡಲೇ ಸಚಿವರು ಧ್ವಜವನ್ನು ಕೆಳಗಿಳಿಸಿ ಮತ್ತೆ ಸರಿಯಾಗಿ ಹಾರಿಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವ – ಶಾಲೆಯಲ್ಲಿ ವಿದ್ಯುತ್ ಅವಘಡ, ವಿದ್ಯಾರ್ಥಿ ಸಾವು
ಘಟನೆಯ ಬಳಿಕ ಬಿಜೆಪಿ ರಾಜ್ಯ ಮುಖ್ಯಸ್ಥ ಕೆ.ಸುರೇಂದ್ರನ್ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಸಚಿವ ರಾಜೀನಾಮೆ ನೀಡಬೇಕು ಹಾಗೂ ಘಟನೆಗೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.