ಕಾರವಾರ: ಭಾರತೀಯ ಸೈನಿಕರ ಮೇಲೆ ಅಭಿಮಾನ ಮತ್ತು ಪ್ರೀತಿಯಿಂದ ಜಿಲ್ಲೆಯ ಸಿದ್ದಾಪುರ ತಾಲೂಕಿನ ವೈದ್ಯರೊಬ್ಬರು ಶ್ರೀನಗರದಿಂದ ಕನ್ಯಾಕುಮಾರಿವರೆಗೆ ಸೈಕಲ್ ತುಳಿದು ಗಮನ ಸೆಳೆದಿದ್ದಾರೆ.
ಸಿದ್ದಾಪುರ ತಾಲೂಕಿನ ಅತ್ತಿಗಾರ ಜಡ್ಡಿ ಗ್ರಾಮದ ಯುವ ವೈದ್ಯ ಡಾ.ಹರ್ಷವರ್ಧನ್ ನಾರಾಯಣ ನಾಯ್ಕ ಸೈನಿಕರ ಅಭಿಮಾನದಿಂದ ಸಾಧನೆ ಮಾಡಿದ್ದಾರೆ. ಶ್ರೀನಗರದಿಂದ ಕನ್ಯಾಕುಮಾರಿಯವರೆಗೆ 3,715 ಕಿಲೋಮೀಟರ್ ದೂರವನ್ನು ಕೇವಲ 19 ದಿನ 5 ಗಂಟೆ ಒಳಗೆ ಕ್ರಮಿಸಿ ಸಾಧನೆ ಮಾಡಿದ್ದಾರೆ.
ನವೆಂಬರ್ 14 ರಂದು ಶ್ರೀನಗರದಿಂದ ಸೈಕಲ್ ತುಳಿಯಲು ಪ್ರಾರಂಭಿಸಿದ ವೈದ್ಯ ಪ್ರತಿ ದಿನ 200 ಕಿ.ಮೀ. ಸೈಕಲ್ ತುಳಿದು ಶ್ರೀನಗರ, ಅಮೃತಸರ, ಕಿಶನ್ ಗಡ, ಶಿರಡಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ಹೊಸೂರು, ಧರ್ಮಾಪುರಿ, ಮಧುರೈ ಮೂಲಕ ಕನ್ಯಾಕುಮಾರಿ ತಲುಪಿ ಇಂದು ಕರ್ನಾಟಕಕ್ಕೆ ಮರಳಿದ್ದಾರೆ.
ಮೂಲತಃ ಸಿದ್ದಾಪುರದವರಾದ ಇವರು ಹುಬ್ಬಳ್ಳಿಯ ಕಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಎಂ.ಬಿ.ಬಿ.ಎಸ್ ಮುಗಿಸಿ ಬೆಂಗಳೂರಿನ ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತಿದ್ದರು. ಚಿಕ್ಕ ವಯಸ್ಸಿನಲ್ಲೇ ಸೈನಿಕರ ಮೇಲೆ ಪ್ರೀತಿ ಹೊಂದಿದ್ದ ಇವರ ಕುಟುಂದಲ್ಲಿ ಅಣ್ಣ, ಬಾವ ಸೇರಿದಂತೆ ಬಹುತೇಕರು ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರಣಾಂತರದಿಂದಾಗಿ ಇವರು ಸೈನ್ಯಕ್ಕೆ ಸೇರುವ ಅವಕಾಶ ತಪ್ಪಿದ ಕಾರಣ ವೈದ್ಯಕೀಯ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದರು.
ಚಕ್ರವರ್ತಿ ಸೂಲಿಬೆಲೆಯವರ ಜಾಗೋ ಭಾರತ್ ನಿಂದ ಸ್ಫೂರ್ತಿ ಪಡೆದು ಜನರಲ್ಲಿ ಸೈನ್ಯದ ಬಗ್ಗೆ ಅರಿವು ಸೈನ್ಯಕ್ಕೆ ಸೇರಲು ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಸೆಲ್ಯುಟ್ ಫಾರ್ ಅವರ್ ಸೋಲ್ಜರ್ಸ್ ಎಂಬ ಹೆಸರಿನ ಮೂಲಕ ಸೈಕಲ್ ಯಾತ್ರೆ ಪ್ರಾರಂಭಿಸಿದರು. ಇದಕ್ಕಾಗಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಈ ಕೆಲಸಕ್ಕೆ ಕೈ ಹಾಕಿ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ.
ಯಾತ್ರೆಯ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯುವಕರಲ್ಲಿ ಸ್ಪೂರ್ತಿ ಹಾಗೂ ಸೈನ್ಯಕ್ಕೆ ಸೇರುವಂತೆ ಜಾಗೃತಿ ಮೂಡಿಸಿದ್ದೇನೆ. ಭಾರತೀಯ ಸೈನಿಕರ ಮೇಲೆ ನಮ್ಮ ದೇಶದಲ್ಲಿ ಅಪಾರ ಪ್ರೀತಿ ಹೊಂದಿರುವ ಜನ ನಾನು ಬಂದಾಗ ಸೆಲ್ಯೂಟ್ ಮಾಡಬೇಕು ಎಂಬ ಆಸೆ ನನ್ನದು. ಈ ಯಾತ್ರೆ ನಂತರವೂ ಸೈನ್ಯಕ್ಕೆ ಯುವಕರು ಸೇರುವಂತೆ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿಸುತ್ತೇನೆ ಎಂದು ಡಾ. ಹರ್ಷವರ್ಧನ್ ಹೇಳಿದ್ದಾರೆ.