ಮೈಸೂರು: ತಮ್ಮ ತಂದೆಯವರನ್ನು ಯಾರಾದರೂ ವೈಯಕ್ತಿಕವಾಗಿ ಟೀಕೆ ಮಾಡಿದರೆ ಅದಕ್ಕೆ ಅವರೇ ಉತ್ತರ ಕೊಡುತ್ತಾರೆ. ಬೇರೆಯವರ ಸಹಾಯ ನಿರೀಕ್ಷೆ ಮಾಡಲ್ಲ. ಇದು ನನ್ನ ತಂದೆಯ ರಾಜಕೀಯ ಶೈಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿದ್ದಾರೆ.
ನಗರದ ಹುಣಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಂದೆ ಮಾಸ್ ಲೀಡರ್. ಅವರನ್ನು ಟೀಕೆ ಮಾಡಿ ಅವರಿಂದ ವಿವಾದಾತ್ಮಕ ಹೇಳಿಕೆ ಬಂದರೆ ಅದು ತಮಗೆ ಲಾಭ ಅನ್ನೋದು ಅನೇಕರ ಲೆಕ್ಕಚಾರವಾಗಿದೆ. ಆದರೆ ತಂದೆಯನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ರೆ ಅವರೇ ಖಡಕ್ ಉತ್ತರ ಕೊಡುತ್ತಾರೆ ಎಂದು ಅಪ್ಪನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ವೇಳೆ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬಳಿಯಿಂದ ಸಾಲ ಪಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಯತೀಂದ್ರ, ನನಗೆ ಗೊತ್ತಿರೋ ಪ್ರಕಾರ ನನ್ನ ತಂದೆ ಯಾರ ಬಳಿಯೂ ಸಾಲ ಮಾಡಿಲ್ಲ. ಮನೆಯ ವಿಚಾರಕ್ಕೆ ಅವರು ಸಾಲ ಪಡೆದಿದ್ದರೆ ಅದು ನನಗೆ ಗೊತ್ತಾಗುತ್ತಿತ್ತು. ಆದರೆ, ಅವರು ರಾಜಕೀಯವಾಗಿ ಸಾಲ ಮಾಡಿದ್ದಾರಾ ಎಂಬುದು ನನಗೆ ಗೊತ್ತಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಅವರು ಯಾರ ಬಳಿಯೂ ಸಾಲ ಪಡೆದಿಲ್ಲ ಎಂದರು. ಇದನ್ನೂ ಓದಿ: ಸಾಲ ಪಡೆದು ಹಣ ನೀಡಿಲ್ಲ – ಕಾಂಗ್ರೆಸ್ ನಾಯಕರ ಹೆಸರು ಬಿಚ್ಚಿಟ್ಟ ಎಂಟಿಬಿ
ಎಂಟಿಬಿ ಆರೋಪವೇನು?
ಬುಧವಾರ ಹೊಸಕೋಟೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಎಂಟಿಬಿ, ನಾನು ಯಾರ ಋಣದಲ್ಲಿ ಇಲ್ಲ. ನನ್ನ ಋಣದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ಸಿದ್ದರಾಮಯ್ಯ, ಮುನಿಯಪ್ಪ, ನಂಜೇಗೌಡ ಮತ್ತು ನಾರಾಯಣಸ್ವಾಮಿ ನನ್ನ ಬಳಿ ಹಣ ಪಡೆದಿದ್ದಾರೆ. ಅದನ್ನು ಇಂದಿಗೂ ವಾಪಸ್ ಮಾಡಿಲ್ಲ. ಕೃಷ್ಣಬೈರೇಗೌಡ ಸಾಲ ಪಡೆದು ವಾಪಸ್ ನೀಡಿದ್ದಾನೆ. ಆದರೆ ಉಳಿದವರು ವಾಪಸ್ ನೀಡಿಲ್ಲ ಎಂದು ಆರೋಪಿಸಿದ್ದರು. ಇದನ್ನೂ ಓದಿ: ಎಂಟಿಬಿ ಖಾತೆಗೆ ಇವತ್ತೇ ಹಣ ಜಮೆ- ಹೊಸೂರು ಬ್ಯಾಂಕ್ ಕತೆ ಹೇಳಿದ ನಂಜೇಗೌಡ