ಚಿಕ್ಕಬಳ್ಳಾಪುರ: ಹಣ-ಹೆಂಡ ಇಲ್ಲದೆ ಚುನಾವಣೆಗಳು ನಡೆಯೋದಿಲ್ಲ. ಅದರ ಜೊತೆಗೆ ಈಗ ಬಾಡೂಟ ಇಲ್ಲದೆ ಕೂಡ ಚುನಾವಣೆಗಳು ನಡೆಯೋದಿಲ್ಲ. ಮತದಾರರ ಮನಗೆಲ್ಲೋಕೆ ಎಲ್ಲೆಂದರಲ್ಲಿ ಭರ್ಜರಿಯಾಗಿ ಬಾಡೂಟಗಳ ಆಯೋಜನೆಗಳು ಸರ್ವೆ ಸಾಮಾನ್ಯ ಎಂಬಂತಾಗಿದೆ.
ಇಂತಹ ಸಂದರ್ಭಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಡಿ ಚುನಾವಣಾಧಿಕಾರಿಗಳು ವಶಪಡಿಸಿಕೊಳ್ಳೋ ಬಾಡೂಟ ಯಾರ ಹೊಟ್ಟೆಯೂ ಸೇರದೆ ಭೂ ತಾಯಿಯ ಮಡಿಲು ಸೇರುತ್ತಿದೆ. ಅಂದ್ರೆ ಮಣ್ಣುಪಾಲಾಗ್ತಿದೆ.
ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದೆ. ಮತದಾರರ ಮನಗೆಲ್ಲೋಕೆ ಅಂತ ರಾಜಕೀಯ ನಾಯಕರು ನಾನಾ ಕಸರತ್ತುಗಳನ್ನ ಮಾಡುತ್ತಿದ್ದಾರೆ. ಇಷ್ಟು ದಿನ ಹಣ, ಸೀರೆ, ಅದು, ಇದು ಅಂತ ನಾನಾ ಅಮಿಷಗಳನ್ನ ಒಡ್ಡಿದ ರಾಜಕೀಯ ನಾಯಕರು ಭರ್ಜರಿ ಬಾಡೂಟವನ್ನ ಹಾಕಿಸಿದ್ರು. ಆದ್ರೆ ಈಗ ಚುನಾವಣಾ ನೀತಿ ಸಂಹಿತೆ ಇರೋದ್ರಿಂದ ಬಾಡೂಟ ಸೇರಿದಂತೆ ಯಾವುದೇ ತೆರನಾದ ಅಮಿಷಗಳನ್ನ ಒಡ್ಡೋದು ಕಾನೂನುಬಾಹಿರವಾಗಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಂದೇ ಚಿಕ್ಕಬಳ್ಳಾಪುರದ ಮಾಜಿ ಜೆಡಿಎಸ್ ನಾಯಕ, ಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಸಂತೋಷದಲ್ಲಿ ಮತದಾರರಿಗೆ ಭರ್ಜರಿ ಬಾಡೂಟವನ್ನು ಉಣಬಡಿಸಿದ್ರು. ಹೀಗಾಗಿ ಮಾಹಿತಿ ತಿಳಿದು ದಾಳಿ ನಡೆಸಿದ ಅಧಿಕಾರಿಗಳು, ಬಾಡೂಟವನ್ನು ಸವಿಯುತ್ತಿದ್ದವರನ್ನು ಅರ್ಧದಲ್ಲೇ ಎಬ್ಬಿಸಿ, ಅಳಿದುಳಿದ ಬಾಡೂಟವನ್ನೇ ಸೀಜ್ ಮಾಡಿ ಕೇಸ್ ದಾಖಲಿಸಿದ್ರು. ಜಪ್ತಿ ಮಾಡಿದ ಬಾಡೂಟವನ್ನು ನ್ಯಾಯಾಲಯದ ಆದೇಶದಂತೆ ಮಣ್ಣಿನಲ್ಲಿ ಹೂತು ಹಾಕಿ ನಾಶಪಡಿಸಿರುವುದಾಗಿ ಎಸ್ ಪಿ ಕಾರ್ತಿಕ್ ರೆಡ್ಡಿ ಸ್ಪಷ್ಟಪಡಿಸಿದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಹೊರಡುತ್ತಿದ್ದಂತೆಯೇ ಚಿಕ್ಕಬಳ್ಳಾಪುರದಲ್ಲಿ ಬಾಡೂಟ ಸೀಜ್
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಮತದಾರರಿಗೆ ಯಾವುದೇ ತೆರನಾದ ಅಮಿಷ ಒಡ್ಡುವ ಆಗಿಲ್ಲ. ಇನ್ನೂ ಚುನಾವಣಾ ಸಮಯದಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳೋ ಮತದಾರರಿಗೆ ಕನಿಷ್ಠ ಕುಡಿಯುವ ನೀರು ಹೊರತುಪಡಿಸಿ ಬೇರೆ ಏನನ್ನೂ ಕೊಡುವ ಆಗಿಲ್ಲ ಅನ್ನೋದು ಕಾನೂನು. ಆದ್ರೆ ಇದೆಲ್ಲವನ್ನೂ ಮೀರಿ ಹಲವು ಕಡೆ ಕದ್ದು ಮುಚ್ಚಿ ಬಾಡೂಟ ಸೇರಿದಂತ ಕೆಲ ಅಮಿಷಗಳನ್ನ ಒಡ್ಡೋದು ಕೂಡ ಮಾಮೂಲಿ. ಇನ್ನೂ ನೀತಿ ಸಂಹಿತೆ ಉಲ್ಲಂಘನೆಯಡಿ, ಆಹಾರವಾದ್ರೂ ಸರಿ ಮಣ್ಣುಪಾಲು ಮಾಡಲೇಬೇಕು.
ಪ್ರತಿ ಬಾರಿ ಚುನಾವಣೆ ನಡೆದಾಗಲೂ ನೀತಿ ಸಂಹಿತೆ ಉಲ್ಲಂಘನೆಯಡಿ ಇಂತಹ ನೂರಾರು ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಕಳೆದ ಬಾರಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿ ದಾಖಲಾದ 100 ಕ್ಕೂ ಹೆಚ್ಚು ಪ್ರಕರಣಗಲ್ಲಿ ಕೇವಲ 7-8 ಪ್ರಕರಣಗಳಲ್ಲೇ ಅಷ್ಟೇ ಶಿಕ್ಷೆ ಪ್ರಕಟವಾಗಿದೆ. ಅದು ಕೇವಲ 100, 200 ರೂಪಾಯಿ ದಂಡವಷ್ಟೇ. ಉಳಿದೆಲ್ಲವೂ ಮತ್ತೊಂದು ಚುನಾವಣೆ ಬಂದ್ರೂ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ.