ಬೆಂಗಳೂರು: ಶಾಲೆಗಳ ಪರಿಸ್ಥಿತಿ ಸುಧಾರಣೆಗೆ ಶಿಕ್ಷಣ ಇಲಾಖೆ ಹೊಸ ಚಿಂತನೆ ಮಾಡಿದೆ. ಶಾಲೆಗಳ ಬಗ್ಗೆ ತಿಳಿಯಲು, ವಿದ್ಯಾರ್ಥಿಗಳ, ಶಿಕ್ಷಕರ ಸಮಸ್ಯೆ ತಿಳಿಯಲು ಸಹಾಯವಾಣಿ ಪ್ರಾರಂಭಿಸಲು ನಿರ್ಧಾರ ಮಾಡಿದೆ.
ಸಹಾಯವಾಣಿಗೆ ವಿದ್ಯಾರ್ಥಿಗಳು, ಪೋಷಕರು ಏನೇ ಸಮಸ್ಯೆ ಇದ್ದರೂ ದೂರಿನ ಮೂಲಕ ನೀಡಬಹುದು. ದೂರು ಪಡೆದ ಅಧಿಕಾರಿಗಳು ಸಂಬಂಧಿಸಿದವರಿಗೆ ದೂರಿನ ಬಗ್ಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ.
ಮಾರ್ಚ್ 31ರ ಒಳಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯವಾಣಿ ಪ್ರಾರಂಭ ಮಾಡಲು ಸಿದ್ಧತೆ ನಡೆಸಿದೆ. ಶಿಕ್ಷಣ ಇಲಾಖೆಯ ಅಧಿಕೃತ ಸಹಾಯವಾಣಿ ಇದಾಗಲಿದೆ. ಕೇವಲ ವಿದ್ಯಾರ್ಥಿಗಳು, ಪೋಷಕರು ಮಾತ್ರವಲ್ಲ. ತಮ್ಮ ಶಿಕ್ಷಕರು ಕೂಡಾ ತಮ್ಮ ಸಮಸ್ಯೆಗಳ ಹೇಳಿಕೊಳ್ಳಬಹುದು.
ಶೈಕ್ಷಣಿಕ ಸಮಸ್ಯೆ, ಶಾಲೆಗಳ ಪರಿಸ್ಥಿತಿಗಳು ಹೀಗೆ ಶಾಲೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಶಿಕ್ಷಕರು ಇಲಾಖೆ ಗಮನಕ್ಕೆ ತರಬಹುದು. ಇಲಾಖೆಗೆ ಅಗತ್ಯ ಸಲಹೆ ಸೂಚನೆಗಳನ್ನು ಶಿಕ್ಷಕರು ಕೊಡಬಹುದಾಗಿದೆ. ಶಿಕ್ಷಕರ ಸಲಹೆಗಳ ಮೇಲೆ ಅಗತ್ಯ ಕ್ರಮವನ್ನು ಇಲಾಖೆ ತೆಗೆದುಕೊಳ್ಳಲಿದೆ.