ಮಂಡ್ಯ: ವಿಧಾನಸಭಾ ಚುನಾವಣೆಗೆ (Karnataka Assembly Election) ಬುಧವಾರ (ಮಾ.22) ಪಕ್ಷದ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ (Congress Candidates List) ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ತಿಳಿಸಿದರು.
ಟಿಕೆಟ್ ಘೋಷಣೆಗೂ ಮುನ್ನ ಮಂಡ್ಯದ (Mandya) ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ತೆರಳಿ ಮಂಗಳವಾರ ಕಾಲಭೈರವೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಭೇಟಿ ನೀಡಿ ದೆಹಲಿಗೆ ವಾಪಸ್ ಆದ ಮೇಲೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಅದರಂತೆ ನಾಳೆ ಅಂದರೆ ಯುಗಾದಿ ದಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಡಿಕೆಶಿ ಹೇಳಿದರು. ಇದನ್ನೂ ಓದಿ: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಸಿನಿಮಾ ನಾಯಕ ನಟ ಸ್ಪರ್ಧೆ
ಇದೇ ವೇಳೆ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ಬಗ್ಗೆ ಮಾತನಾಡಿ, ಯಾರು ಕೂಡ ಹಿಂದೆ ಸರಿಯುತ್ತಿಲ್ಲ. ಸಿದ್ದರಾಮಯ್ಯ ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶವಿದೆ. ಕೋಲಾರ, ವರುಣ, ಬಾದಾಮಿ, ಚಾಮುಂಡೇಶ್ವರಿ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಲಿ. ಅವರ ಅನುಕೂಲ ನೋಡಿಕೊಂಡು ತೀರ್ಮಾನ ಮಾಡಲಿ. ಎಲ್ಲಿ ತೀರ್ಮಾನ ಮಾಡ್ತಾರೋ ಅಲ್ಲೇ ಅವಕಾಶ ಕೊಡ್ತೀವಿ ಎಂದರು.
ಡಿ.ಕೆ.ಸುರೇಶ್ ಸ್ಪರ್ಧೆಗೆ ಹೈಕಮಾಂಡ್ ಒತ್ತಡ ಕುರಿತು ಮಾತನಾಡಿ, ಸಂಸದರಾಗಿ ಇರಬೇಕೆಂದು ಡಿ.ಕೆ.ಸುರೇಶ್ ಬಯಸಿದ್ದಾರೆ. ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ಳುತ್ತೇವೆ. ಯಾರೇ ಅಭ್ಯರ್ಥಿ ಆದರೂ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅಭ್ಯರ್ಥಿ ಎಂದು ಮತ ಕೇಳ್ತೇವೆ. ಜನರು ನಮ್ಮ ಅಭ್ಯರ್ಥಿ ಗೆಲ್ಲಿಸುತ್ತಾರೆ. ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ಗೊತ್ತಿಲ್ಲ. ನಾನು ಯಾರಿಗೂ ಪೊಲಿಟಿಕಲಿ ಡ್ಯಾಮೇಜ್ ಮಾಡಲ್ಲ. ಈ ಬಗ್ಗೆ ನಾರಾಯಣಗೌಡರನ್ನೇ ಕೇಳಬೇಕು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ: ರಮೇಶ್ ಜಾರಕಿಹೊಳಿ
ಉರಿಗೌಡ-ನಂಜೇಗೌಡ (Urigowda-Nanjegowda) ವಿವಾದ ಕುರಿತು ಪ್ರತಿಕ್ರಿಯಿಸಿ, ಶ್ರೀಗಳು ಬಿಜೆಪಿ ನಾಯಕರಿಗೆ ಬುದ್ದಿ ಹೇಳಿದ್ದೆ ತಪ್ಪು. ಸಿ.ಟಿ.ರವಿ, ಅಶ್ವಥ್ ನಾರಾಯಣನೇ ಉರಿಗೌಡ, ನಂಜೇಗೌಡ. ಬೇರೆ ಯಾರೂ ಅಲ್ಲ. ಪಠ್ಯಕ್ಕೆ ಉರಿಗೌಡ, ನಂಜೇಗೌಡ ವಿಷಯ ಸೇರಿಸುವ ಯಾವ ವಿಷಯವೂ ಇಲ್ಲ. ಯಾವ ಪಠ್ಯನೂ ಇಲ್ಲ. ಎಲ್ಲ ಮೇಷ್ಟ್ರುಗಳನ್ನ ಕೇಳೋಕೆ ಹೇಳಿ. ಅಶ್ವಥ್ ನಾರಾಯಣ್, ಸಿ.ಟಿ.ರವಿಗೆ ಅವರ ಮೇಷ್ಟ್ರು ಹೇಳ್ಕೊಟ್ಟಿದ್ರಾ ಎಂದು ತರಾಟೆಗೆ ತೆಗೆದುಕೊಂಡರು.
ಕಾಲಭೈರೇಶ್ವರನಿಗೆ ಪೂಜೆ ಸಲ್ಲಿಸಿದ ಬಳಿಕ ನಿರ್ಮಲಾನಂದನಾಥ ಶ್ರೀಗಳನ್ನು ಡಿಕೆಶಿ ಭೇಟಿಯಾಗಿ ಚರ್ಚೆ ನಡೆಸಿದರು. ನಿನ್ನೆಯಷ್ಟೇ ಉರಿಗೌಡ, ನಂಜೇಗೌಡ ಕುರಿತು ಸ್ವಾಮೀಜಿ ಮಾತನಾಡಿದ್ದರು. ಇದರ ಬೆನ್ನಲ್ಲೇ ಶ್ರೀಗಳನ್ನು ಡಿಕೆಶಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.