ಚಿಕ್ಕೋಡಿ: ಮಹೇಶ್ ಕುಮಠಳ್ಳಿ (Mahesh Kumathalli) ಅವರಿಗೆ ಟಿಕೆಟ್ ಸಿಗದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ತಿಳಿಸಿದರು.
ಅಥಣಿ ಪಟ್ಟಣದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಲಕ್ಷ್ಮಣ ಸವದಿ (Laxman Savadi) ಬುದ್ಧಿವಂತ ರಾಜಕಾರಣಿ, ಅವರು ಹಿಂಗ್ಯಾಕೆ ಮಾಡುತ್ತಿದ್ದಾರೆ ಎಂಬುದು ತಿಳಿದಿಲ್ಲ. ಅವರಿಗೆ ಕನಿಷ್ಠ ಜ್ಞಾನ ಇರಬೇಕು. ಎಂಎಲ್ಸಿ ಆಗಿದ್ದರೂ, ವರಿಷ್ಠರ ಹತ್ತಿರ ಟಿಕೆಟ್ ಕೇಳುತ್ತೇನೆ ಎಂದು ಹೇಳಿಕೆ ನೀಡಿರುವುದು ನನಗೆ ಅಚ್ಚರಿಯಾಗಿದೆ. ಮಹೇಶ್ ಕುಮಠಳ್ಳಿ ತ್ಯಾಗದಿಂದ ಈ ಸರ್ಕಾರ ರಚನೆಯಾಗಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಥಣಿ (Athani) ಮುಂದಿನ ಬಿಜೆಪಿ (BJP) ಅಭ್ಯರ್ಥಿ ಮಹೇಶ್ ಕುಮಠಳ್ಳಿ. ಒಂದು ವೇಳೆ ಮಹೇಶ್ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ, ನಾನು ಗೋಕಾಕ್ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ಎಂಬುದು ಗೊತ್ತಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಆದರೂ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಮಹೇಶ್ ಕುಮಠಳ್ಳಿ ಅವರಿಗೆ ಟಿಕೆಟ್ ತಪ್ಪುವಂತ ಯಾವುದೇ ಸಮಸ್ಯೆಯಿಲ್ಲ, ಬಿಜೆಪಿಯಲ್ಲಿ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ. ಕೆಲವರು ಸುಮ್ಮನೆ ಗೊಂದಲ ಮೂಡಿಸುತ್ತಿದ್ದಾರೆ. ಅಥಣಿಯಿಂದ ಮಹೇಶ್ ಕುಮಠಳ್ಳಿ, ಗೋಕಾಕದಿಂದ ರಮೇಶ್ ಜಾರಕಿಹೊಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್ ಸ್ಪರ್ಧೆ ಮಾಡುತ್ತೇವೆ. ಇದರಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಬಿಜೆಪಿಗೆ ಚಿಂಚನಸೂರ್ ರಾಜೀನಾಮೆ ನೀಡಿದ್ಯಾಕೆ?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೊನ್ನೆ ದೆಹಲಿಯಲ್ಲಿ ಭೇಟಿ ಮಾಡಿದ್ದೇನೆ. ಕೆಲವು ವಿಚಾರಗಳನ್ನು ಹೇಳುವುದಕ್ಕೆ ಬರುವುದಿಲ್ಲ. ನಾನು ಅವರ ಮುಖಾಂತರ ಬಿಜೆಪಿಗೆ ಬಂದೆ. ತುಂಬಾ ದಿನದಿಂದ ಭೇಟಿ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಭೇಟಿ ಆಗಿ ಬಂದಿದ್ದೇನೆ. ಮಾ. 28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಥಣಿಗೆ ಭೇಟಿ ನೀಡಿ 1,250 ಕೋಟಿ ರೂ. ವೆಚ್ಚದಲ್ಲಿ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ವಯಸ್ಸಾದ ವೃದ್ಧರಿಗೆ ಸೇರಬೇಕಾದ ಪಿಂಚಣಿ ವಯಸ್ಕರ ಜೇಬಿಗೆ – ಓರ್ವ ಅರೆಸ್ಟ್