ಬೆಂಗಳೂರು: ತ್ರಯಂಬಕಂ ಚಿತ್ರ ಈ ವಾರ ಅದ್ಧೂರಿಯಾಗಿ ತೆರೆ ಕಾಣುತ್ತಿದೆ. ಟ್ರೈಲರ್ ಮೂಲಕವೇ ಅಪರೂಪದ ಕಥೆಯ ಸುಳಿವು ನೀಡಿರೋ ದಯಾಳ್ ಪದ್ಮನಾಭನ್ ನಿರ್ದೇಶನದ ಈ ಚಿತ್ರಕ್ಕಾಗಿ ಪ್ರೇಕ್ಷಕರೂ ಕೂಡಾ ಕಾತರದಿಂದ ಕಾಯಲಾರಂಭಿಸಿದ್ದಾರೆ. ಗೆಲುವಿನ ಸ್ಪಷ್ಟ ಸೂಚನೆಯೊಂದಿಗೆ ಲಕಲಕಿಸುತ್ತಿರುವ ಈ ಚಿತ್ರಕ್ಕೆ ಹಣ ಹೂಡಿದವರೂ ಕೂಡಾ ಈಗ ನಿರಾಳವಾಗಿದ್ದಾರೆ!
ದಯಾಳ್ ಅವರು ಈ ಬಾರಿ ಕಮರ್ಶಿಯಲ್ ಆಗಿಯೂ ನೆಲೆ ಕಂಡುಕೊಂಡು ಮತ್ತಷ್ಟು ಪ್ರೇಕ್ಷಕರನ್ನು ತಲುಪಿಕೊಳ್ಳುವ ಉದ್ದೇಶದೊಂದಿಗೇ ಅಖಾಡಕ್ಕಿಳಿದಿದ್ದಾರೆ. ಈ ಹಿಂದೆ ‘ಆ ಕರಾಳ ರಾತ್ರಿ’ ಚಿತ್ರದ ಸಂಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದವರೇ ತ್ರಯಂಬಕಂ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹೀಗೆ ಕಷ್ಟಕಾಲದಲ್ಲಿ ನೆರವಾದ ನಿರ್ಮಾಪಕರನ್ನು ದಯಾಳ್ ಬಿಡುಗಡೆಗೂ ಮುನ್ನವೇ ಸೇಫ್ ಮಾಡಿದ್ದಾರೆ.
ತ್ರಯಂಬಕಂ ಚಿತ್ರದ ವಿತರಣಾ ಹಕ್ಕನ್ನು ಜಾಕ್ ಮಂಜುನಾಥ್ ಅವರು ಪಡೆದುಕೊಂಡಿದ್ದಾರೆ. ಈ ಮೂಲಕವೇ ನಿರ್ಮಾಪಕರು ಹೂಡಿದ ಒಟ್ಟಾರೆ ಹಣದಲ್ಲಿ ಅರ್ಧದಷ್ಟು ವಾಪಾಸಾಗಿದೆಯಂತೆ. ಈ ಮೂಲಕ ನಿರ್ಮಾಪಕರು ಬಿಡುಗಡೆ ಪೂರ್ವದಲ್ಲಿಯೇ ನಿರಾಳವಾಗಿದ್ದಾರೆ. ಈಗ ಹಬ್ಬಿಕೊಂಡಿರುವ ಸಕಾರಾತ್ಮಕ ಅಲೆಯೇ ಪ್ರೇಕ್ಷಕರನ್ನು ಥೇಟರಿನತ್ತ ಕರೆತರೋದರಲ್ಲಿ ಯಾವ ಸಂದೇಹವೂ ಇಲ್ಲ. ಅದುವೇ ತ್ರಯಂಬಕಂ ಚಿತ್ರಕ್ಕೆ ಭರಪೂರ ಗೆಲುವು ತಂದುಕೊಡಲಿದೆ ಎಂಬ ಭರವಸೆ ದಯಾಳ್ ಅವರದ್ದು.