ಕಲಬುರಗಿ: ಕಾಂಗ್ರೆಸ್ನಲ್ಲಿ ಸಮನ್ವಯತೆ ಇದೆ. ಎಲ್ಲರೂ ತಮ್ಮ ಅಭಿಪ್ರಾಯವನ್ನು ಶನಿವಾರವೇ ತಿಳಿಸಿದ್ದಾರೆ. ಪಕ್ಷ ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ಬದ್ಧರಿರುವದಾಗಿ ಹೇಳಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಪಕ್ಷದ ವರಿಷ್ಠರು ಕೆಪಿಸಿಸಿ ಅಧ್ಯಕ್ಷ ನೇಮಕದ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಷ್ಟೆಯಿಂದ ನಿರ್ವಹಿಸುತ್ತೇನೆ. ರಾಜ್ಯ ಸರ್ಕಾರ ಅಧಿವೇಶನವನ್ನು ಕರೆಯುತ್ತಿಲ್ಲ. ಕನಿಷ್ಠ ಹದಿನೈದು ದಿನವಾದರೂ ಅಧಿವೇಶನ ಕರೆದು ಜನರ ಸಮಸ್ಯೆ ಚರ್ಚಿಸಲು ಅವಕಾಶ ನೀಡಬೇಕು ಎಂದರು.
ಈ ಹಿಂದೆ ಹೆಸರಿಗೆ ಮಾತ್ರ ಎನ್ನುವಂತೆ ಅಧಿವೇಶನ ಕರೆದು ಕೈ ತೊಳೆದುಕೊಂಡಿದ್ದು, ಇದೀಗ ಮತ್ತೆ ಅಧೀವೇಶನ ನಡೆಸುವುದ್ದಾಗಿ ಹೇಳಿದ್ದಾರೆ. ಆದರೆ ಎಷ್ಟು ದಿನ ನಡೆಸುತ್ತೇವೆ ಎನ್ನುವುದನ್ನು ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಸಿದ್ದಗಂಗಾ ಶ್ರೀಗಳ ಮಠದಲ್ಲಿ ರಾಜಕೀಯ ಭಾಷಣ ಮಾಡಿರುವುದು ಸರಿಯಲ್ಲ. ರಾಜ್ಯದ ಜನರಿಗೆ ನರೇಂದ್ರ ಮೋದಿ ಅವಮಾನ, ಮೋಸ ಮಾಡಿದ್ದಾರೆ. ಇಂತಹ ಪ್ರಧಾನಿ ನಮಗೆ ಬೇಕಾ ಅನ್ನೋ ಚರ್ಚೆ ಇದೀಗ ಜನರಲ್ಲಿ ಪ್ರಾರಂಭವಾಗಿದೆ ಎಂದು ಹೇಳಿದರು.
ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ. ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಅವರ ಮೇಲೆ ಹೆಸರಿಗೆ ಮಾತ್ರ ದೂರು ದಾಖಲಿಸಿದ್ದಾರೆ, ಇದು ಸರಿಲ್ಲ. ಅವರನ್ನು ಕಾನೂನು ಪ್ರಕಾರ ಬಂಧಿಸಬೇಕು ಎಂದು ಆಗ್ರಹಿಸಿದರು.