ಹುಬ್ಬಳ್ಳಿ: ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಕೊರೊನಾ ಹೊಸ ತಳಿ ಬಂದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮೂರನೇ ಅಲೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಲವು ದೇಶಗಳಲ್ಲಿ ಈಗಾಗಲೇ 3ನೇ ಅಲೆ ಕುರಿತು ಮಾತುಗಳು ಕೇಳಿಬರುತ್ತಿದೆ. ರಷ್ಯಾ, ಇಂಗ್ಲೆಂಡ್ ರೀತಿಯಲ್ಲಿ ದೇಶದ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಕೊರೊನಾ ಹೊಸ ತಳಿ ಬಂದಿದೆ ಎಂಬ ವರದಿ ಬಂದಿದೆ. ಹೀಗಾಗಿ ನಮ್ಮ ತಜ್ಞರ ಮತ್ತು ತಾಂತ್ರಿಕ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಹೊಸ ತಳಿಯ ಲಕ್ಷಣಗಳ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ನಮ್ಮ ಗಮನಕ್ಕೆ ತರಲು ಸೂಚಿಸಿದ್ದೇನೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಮೊದಲ ಡೋಸ್ ವ್ಯಾಕ್ಸಿನ್ ಪಡೆದವರು ಎರಡನೇ ಡೋಸ್ ಕಡ್ಡಾಯ ಪಡೆದುಕೊಳ್ಳಬೇಕು ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಪಠ್ಯ ಕಡಿತ: ಬಿ.ಸಿ.ನಾಗೇಶ್
ಶಾಲೆ ಆರಂಭ ಕುರಿತು ಮಾತನಾಡಿದ ಅವರು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುತ್ತೆ. 4 ತಿಂಗಳಿನಿಂದಲೂ ಶಾಲೆಗಳು ಆರಂಭವಾಗಿದ್ದರೂ, ಈವರೆಗೆ ಮಕ್ಕಳಲ್ಲಿ ಅಂತಹ ಆತಂಕ ಕಂಡುಬಂದಿಲ್ಲ. ಮಕ್ಕಳಲ್ಲಿ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ. ವಿದ್ಯಾರ್ಥಿಗಳ ಕಲಿಕೆ ಈಗಾಗಲೇ ನಿಂತುಹೋಗಿದೆ. ಹೀಗಾಗಿ ಸರ್ಕಾರದ್ದು, ಅತ್ಯಂತ ಜವಾಬ್ದಾರಿ ನಡೆ ಇದೆ. ಶಾಲೆಗಳಲ್ಲಿ 1 ಪ್ರತಿಶತಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದರೆ ಅಂತಹ ಶಾಲೆಗಳನ್ನು ಬಂದ್ ಮಾಡಲಾಗುತ್ತದೆ. ಹಲವು ಮಾರ್ಗಸೂಚಿಗಳನ್ನು ಇಟ್ಟುಕೊಂಡು ಇದೀಗ ಶಾಲೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆ ವಿಧಾನಸೌಧ ಖಾಲಿ ವಿಚಾರವಾಗಿ ಮಾತನಾಡಿದ ಅವರು, ಇಂತಹ ಆರೋಪಗಳು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಎಲ್ಲ ಯೋಜನೆಯ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿವೆ. ನಾನು ಎಲ್ಲೇ ಇದ್ದರೂ ಸಭೆಗಳನ್ನು ಮಾಡುತ್ತಿದ್ದೇನೆ. ಕಳೆದ ಎಂಟು ದಿನಗಳಿಂದ ಈ ಭಾಗದಲ್ಲಿದ್ದೇವೆ. ಇಲ್ಲಿ ಬಂದರೂ ಸಹ ಹಲವು ಜಿಲ್ಲೆಗಳಲ್ಲಿ ಆರೋಗ್ಯ ವಿಚಾರವಾಗಿ ಪರಿಶೀಲನೆ ಮಾಡುತ್ತಿದ್ದೇವೆ. ಉಪಚುನಾವಣೆ ಇದೇ ಮೊದಲಲ್ಲ. ಎಲ್ಲ ಸರ್ಕಾರಗಳು ಅಧಿಕಾರದಲ್ಲಿದ್ದಾಗಲೂ, ಉಪಚುನಾವಣೆ ಎದುರಿಸಿದ್ದಾರೆ. ಎಲ್ಲರೂ ಇದನ್ನೇ ಮಾಡಿದ್ದಾರೆ. ಉಪಚುನಾವಣೆಯಲ್ಲಿ ನಾಲ್ಕೈದು ಸಚಿವರುಗಳು ಬಂದು ಪ್ರಚಾರ ಕೈಗೊಳ್ಳುವುದು ವಿಶೇಷವೂ ಅಲ್ಲ, ಹೊಸದೂ ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ತಂದೆ ಹಿಂದೂ, ತಾಯಿ ಮುಸ್ಲಿಂ, ನಾನು ಜಾತ್ಯತೀತ ಕುಟುಂಬಕ್ಕೆ ಸೇರಿದ್ದೇನೆ: ಸಮೀರ್ ವಾಂಖೆಡೆ ತೀಕ್ಷ್ಣ ಪ್ರತಿಕ್ರಿಯೆ
ಹಾನಗಲ್ ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಬೊಮ್ಮಾಯಿ ಈಗಾಗಲೇ ಇದು ನನ್ನ ಪ್ರತಿಷ್ಠೆಯಲ್ಲ, ಹಾನಗಲ್ ಜನರ ಅಭಿವೃದ್ದಿಯ ಪ್ರತಿಷ್ಠೆ ಎಂದಿದ್ದಾರೆ. ನಾನೂ ಕೂಡ ಸಿಎಂ ಮಾತಿಗೆ ಬದ್ಧನಾಗಿದ್ದೇನೆ. ಅದು ಅಲ್ಲದೇ ಕ್ಷೇತ್ರದ ಜನರಿಗೂ ಹೇಳಿದ್ದೇನೆ. ಈ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಬಿಜೆಪಿ ಅಭ್ಯರ್ಥಿ ಸರ್ಕಾರದ ಪರ ಇರುತ್ತಾರೆ. ಅವರನ್ನೇ ಗೆಲ್ಲಿಸಬೇಕು. ಒಂದು ಸೀಟು ಗೆದ್ದರೆ ಅಥವಾ ಸೋತರೆ ಸರ್ಕಾರಕ್ಕೇನೂ ಅಪಾಯವಿಲ್ಲ. ಆದರೂ ಕೂಡ ಯಾವುದೇ ಚುನಾವಣೆಯಲ್ಲಿ ಗೆದ್ದಾಗ ನೈತಿಕಸ್ಪೂರ್ತಿ ಹಾಗೂ ಧೈರ್ಯ ಹೆಚ್ಚಾಗುತ್ತೆ. ಬೊಮ್ಮಾಯಿ ಅವರು ಮೊದಲ ಬಾರಿಗೆ ಸಿಎಂ ಆದ ಬಳಿಕ ತಮ್ಮ ಕ್ಷೇತ್ರದಲ್ಲಿ ತೊಡಗಿಕೊಂಡಿರುವುದು ಸಹಜವಾಗಿ ಎಲ್ಲರಿಗೂ ಕುತೂಹಲ ಹೆಚ್ಚಾಗಿರುತ್ತೆ ಎಂದು ಹೇಳಿದ್ದಾರೆ.