ಮಂಡ್ಯ: ಜೆಡಿಎಸ್ ಶಾಸಕ ಸುರೇಶ್ ಗೌಡ ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸಿಎಂ ಯಡಿಯೂರಪ್ಪ ಅವರು ಆದಿಚುಂಚನಗಿರಿಗೆ ಆಗಮಿಸುತ್ತಿದ್ದಂತೆ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ಗೌಡ, ಸಿಎಂಗೆ ಹೂವಿನ ಹಾರ ಹಾಕಿ ಕಾಲಿಗೆ ಬಿದ್ರು. ಸುರೇಶ್ಗೌಡ ಸಿಎಂ ಕಾಲಿಗೆ ಬಿದ್ದಿರೋದು ಇದೀಗ ಮಂಡ್ಯ ರಾಜಕೀಯದಲ್ಲಿ ಹಲವು ಅನುಮಾನಗಳಿಗೆ ಏಡೆ ಮಾಡಿಕೊಟ್ಟಿದೆ. ಸುರೇಶ್ ಗೌಡ ಬಿಜೆಪಿ ಸೇರುತ್ತಾರಾ ಎಂದು ರಾಜಕೀಯ ಮುಖಂಡರು ಮಾತಾಡಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಕೂಡ ಸುರೇಶ್ ಗೌಡ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು.
ಉಪಚುನಾವಣೆಯ ಗೆಲುವಿನ ಬಳಿಕ ಮೊದಲ ಬಾರಿ ಸಿಎಂ ಯಡಿಯೂರಪ್ಪ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಗೆ ಇಂದು ಭೇಟಿ ನೀಡಿದರು. ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಸಿಎಂ ಚಾಲನೆ ನೀಡಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡುವ ಮೊದಲು ಆದಿಚುಂಚನಗಿರಿಯಲ್ಲಿನ ಕಾಲಭೈರವೇಶ್ವರನಿಗೆ ಹುಣ್ಣಿಮೆ ಪೂಜೆ ಸಲ್ಲಿಸಿದರು. ರಾಜ್ಯ ಸರ್ಕಾರ ಯಾವುದೇ ಸಮಸ್ಯೆಗೆ ಒಳಗಾಗ ಬಾರದು ಸುಭದ್ರವಾಗಿ ಇರುವಂತೆ ಕಾಲಭೈರವೇಶ್ವರನಲ್ಲಿ ಪ್ರಾರ್ಥನೆ ಮಾಡಿಕೊಂಡ್ರು. ನಂತರ ಮಠದಲ್ಲಿ ಸ್ವಾಮೀಜಿ ನಿರ್ಮಲಾನಂದ ಶ್ರೀ, ಸಚಿವ ಆರ್.ಅಶೋಕ್, ಶಾಸಕರಾದ ಸುರೇಶ್ಗೌಡ, ನಾರಾಯಣಗೌಡ, ಅವರೊಂದಿಗೆ ಉಪಾಹಾರ ಸೇವನೆ ಮಾಡಿದರು. ಇದೇ ವೇಳೆ ಈ ಹಿಂದೆ ವಿವಿಧ ವಿಭಾಗಗಳಲ್ಲಿ ರಾಜ್ಯ ಮಟ್ಟದ ಕ್ರೀಡಾಕೂಟದಲದಲ್ಲಿ ಗೆಲವು ಸಾಧಿಸಿದ್ದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.
ಕ್ರೀಡಾಕೂಟಕ್ಕೆ ಚಾಲನೆ ನೀಡಿದ ನಂತರ ವೇದಿಕೆಯಲ್ಲಿ ಶಾಸಕ ನಾರಾಯಣಗೌಡ ಹಾಗೂ ಶಾಸಕ ಸುರೇಶ್ಗೌಡ ಇಬ್ಬರು ಕೈ ಕೈ ಹಿಡಿದುಕೊಂಡು ಮಾತನಾಡಿದ್ರು. ಈ ಹಿಂದೆ ಜೆಡಿಎಸ್ನಿಂದ ಹೊರ ಹೋದ ಸಂದರ್ಭದಲ್ಲಿ ನಾರಾಯಣಗೌಡ ವಿರುದ್ಧ ಶಾಸಕ ಸುರೇಶ್ಗೌಡ ಅವರ ವಿರುದ್ಧ ವಾಗ್ದಾಳಿ ಮಾಡಿದ್ದರು. ಆದರೆ ಇಂದು ಇಬ್ಬರು ಕೈ ಕೈ ಹಿಡಿದು ಮಾತಾನಾಡುವುದನ್ನು ನೋಡಿದವರಿಗೆ ಆಶ್ಚರ್ಯ ಉಂಟಾಯಿತು. ಆದಿಚುಂಚನಗಿರಿಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಕಾರ್ಯಕ್ರಮ ಹಲವು ಆಶ್ಚರ್ಯ ಹಾಗೂ ಅನುಮಾನಗಳಿಗೆ ಸಾಕ್ಷಿಯಾಗಿತ್ತು.