ಬೆಂಗಳೂರು: ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ರಾಜೀನಾಮೆ ಕೊಟ್ಟಿದ್ದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಅವರಿಗೆ ದೇವರ ವರ ಎಂದು ಬೆಂಬಲಿಗರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣವಾಗಳಲ್ಲಿ ನಿಖಿಲ್ ಅವರ ಬೆಂಬಲಗರು ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ. ಮೈತ್ರಿ ಬುಡ ಅಲ್ಲಾಡುತ್ತಿದ್ದು, ಸಿಎಂ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ನಿಖಿಲ್ ಫ್ಯಾನ್ಸ್ ಮಾತ್ರ ಫುಲ್ ಖುಷಿಯಲ್ಲಿದ್ದಾರೆ.
ನಿಖಿಲ್ ಅವರನ್ನು ಸಂಸದರಾಗಿ ನೋಡುವ ಭಾಗ್ಯ ಸಿಗದಿದ್ದರೂ ಭಾವಿ ಶಾಸಕರನ್ನಾಗಿ ನೋಡುವ ವರವನ್ನು ದೇವರು ನೀಡಿದ್ದಾನೆ. ನಾರಾಯಣ ಗೌಡ ಅವರ ರಾಜೀನಾಮೆಯಿಂದ ತೆರವಾಗುವ ಕೆ.ಆರ್.ಪೇಟೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ಮಾಡುತ್ತಾರೆ. ಆಗ ಅವರು ಭಾರೀ ಅಂತರಿಂದ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡುತ್ತಾರೆ ಎಂದು ಬೆಂಬಲಿಗರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಾರಾಯಣ್ಗೌಡ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಒಂದು ವೇಳೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾದರೆ ಕೆ.ಆರ್.ಪೇಟೆ ಕ್ಷೇತ್ರದಿಂದ ನಿಖಿಲ್ ಅವರ ಸ್ಪರ್ಧೆ ಖಚಿತ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೀಗಾಗಿ ನಿಖಿಲ್ ಅವರ ಬೆಂಬಲಿಗರು ಫುಲ್ ಖುಷಿಯಾಗಿದ್ದಾರೆ. ಇತ್ತ ಅಮೆರಿಕದಿಂದ ಆಗಮಿಸಿರುವ ಸಿಎಂ ಅಧಿಕಾರ ಉಳಿಸಿಕೊಳ್ಳಲು ತಂತ್ರ ರೂಪಿಸುತ್ತಿದ್ದಾರೆ.