ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ ಅವರನ್ನು ಕೈ ಬಿಡಲಾಗಿದ್ದು, ಈ ಕುರಿತು ನಿರ್ಮಾಪಕರಾದ ಆರೂರು ಜಗದೀಶ್ ಮತ್ತು ಸ್ಮಿತಾ ಶೆಟ್ಟಿ ಜಂಟಿಯಾಗಿ ಅನಿರುದ್ಧ ಅವರಿಗೆ ಇ-ಮೇಲ್ ಕಳುಹಿಸಿದ್ದಾರೆ. ಅನಿರುದ್ಧ ಅವರನ್ನು ಧಾರಾವಾಹಿಯಿಂದ ಕೈ ಬಿಟ್ಟಿರುವ ಕುರಿತು ಮಾಧ್ಯಮಗಳಿಗೂ ಆರೂರು ಜಗದೀಶ್ ಖಚಿತ ಪಡಿಸಿದ್ದಾರೆ. ಜೊತೆಗೆ ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಧಾರಾವಾಹಿ ಶುರುವಾಗಿ ಎರಡು ತಿಂಗಳ ನಂತರ ಅನಿರುದ್ಧ ಅವರು ಅಸಹಕಾರವನ್ನು ತೋರುತ್ತಾ ಬಂದಿರುವುದಾಗಿಯೂ ನಿರ್ಮಾಪಕರು ಆರೋಪಿಸಿದ್ದಾರೆ. ಅಲ್ಲದೇ, ಬೀದಿ ಬದಿಯಲ್ಲಿ ಕೂತು ತಿನ್ನುತ್ತಿದ್ದ ಅನಿರುದ್ಧ ಅವರು, ಇದೀಗ ಕ್ಯಾರಾವಾನ್ ಇಲ್ಲದೇ ಶೂಟಿಂಗ್ ಗೆ ಬರುವುದಿಲ್ಲ ಎನ್ನುವಲ್ಲಿಗೆ ಬೆಳೆದಿದ್ದಾರೆ. ಹಾಗಾಗಿ ಅವರಿಂದ ಸಾಕಷ್ಟು ಹಣವನ್ನು ಕಳೆದುಕೊಂಡಿರುವುದಾಗಿ ಜಗದೀಶ್ ಆರೋಪಗಳನ್ನು ಮಾಡಿದ್ದಾರೆ.
ಜಗದೀಶ್ ಮಾಡುವ ಆರೋಪವೇನು?
* ಅನಿರುದ್ಧ ಅವರು ಧಾರಾವಾಹಿ ಪಾತ್ರ ಒಪ್ಪಿಕೊಂಡಾಗ ಆರ್ಯವರ್ಧನ್ ಪಾತ್ರ ನೆಗಟಿವ್ ಆಗಿತ್ತು. ಇವರು ಜನಪ್ರಿಯತೆ ಜಾಸ್ತಿ ಆಗುತ್ತಿದ್ದಂತೆಯೇ ಆ ಪಾತ್ರವನ್ನು ಬದಲಿಸಲು ಪಟ್ಟು ಹಿಡಿದರು. ಪಾತ್ರವನ್ನು ಪಾಸಿಟಿವ್ ರೀತಿಯಲ್ಲಿ ಕಥೆ ಮಾಡಿಸಿದರು. ಕಥೆಯೇ ಬಿದ್ದು ಹೋಯಿತು.
* ಡೈಲಾಗ್ ಸ್ಕ್ರಿಪ್ ಸಲುವಾಗಿ ಅನೇಕ ಬಾರಿ ಜಗಳ ಮಾಡಿದ್ದಾರೆ. ಸೀನ್ ಪೇಪರ್ ತಡವಾಗಿ ಬಂದರೆ ಶೂಟಿಂಗ್ ಮಾಡುವುದಿಲ್ಲ ಎಂದೇ ಎದ್ದೇ ಹೋಗುತ್ತಿದ್ದರು.
* ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕ್ಯಾರವಾನ್ ಬಳಸುವುದಿಲ್ಲ. ಇವರಿಗಾಗಿ ಕ್ಯಾರವಾನ್ ತರಿಸಲಾಗುತ್ತಿತ್ತು. ಕ್ಯಾರವಾನ್ ಗಾಗಿ ಗಲಾಟೆ ಮಾಡಿದರು.
* ಧಾರಾವಾಹಿ ನಡೆಯುತ್ತಿರುವುದೇ ನನ್ನಿಂದ ಎನ್ನುವಂತೆ ದುರಹಂಕಾರ ತೋರಿಸಿದರು. ಧಾರಾವಾಹಿ ಬಗ್ಗೆ ನೆಗೆಟಿವ್ ಪ್ರಚಾರ ಮಾಡುತ್ತಾ ಬಂದರು.
* ಬೆನ್ಜ್ ಕಾರು, ಹೆಲಿಕಾಪ್ಟರ್ ಹೀಗೆ ದುಬಾರಿ ಖರ್ಚು ಮಾಡಿ ಧಾರಾವಾಹಿ ಮಾಡುತ್ತಿದ್ದರೂ, ಅವರು ಅದಕ್ಕೆ ಕ್ಯಾರೆ ಅನ್ನುತ್ತಿರಲಿಲ್ಲ. ಹಾಗಾಗಿ ಇವರಿಂದಾಗಿಯೇ ಸಾಕಷ್ಟು ಲಾಸ್ ಆಗಿದೆ.
* ಪ್ರತಿ ಶಾಟ್ ತಗೆದಾಗಲೂ ಮಾನೆಟರ್ ಹತ್ತಿರ ಬಂದು ನೋಡುತ್ತಿದ್ದರು. ಮತ್ತೊಂದು ಸಲ ನಟಿಸ್ತೀನಿ ಅನ್ನುತ್ತಿದ್ದರು. ಹೀಗಾಗಿ ಕಾಲಹರಣವಾಗುತ್ತಿತ್ತು.
* ಸಣ್ಣದೊಂದು ತಪ್ಪಾದರೂ, ಸೆಟ್ ನಲ್ಲಿ ಜೋರಾಗಿ ಕೂಗುತ್ತಿದ್ದರು. ಬೈಯುತ್ತಿದ್ದರು. ಇವರ ಸಲುವಾಗಿ ಅನೇಕರು ಕೆಲಸ ಬಿಟ್ಟು ಹೋದರು. ಕೆಲವರನ್ನು ನಾವೇ ಕಳುಹಿಸಿ ಕೊಡಬೇಕಾಯಿತು.
* ಒಂಬತ್ತು ಗಂಟೆಗೆ ಫಸ್ಟ್ ಶಾಟ್ ಅಂದರೆ, ಬರುತ್ತಿರಲಿಲ್ಲ. ತಿಂಡಿ ತಿನ್ನುತ್ತಾ, ಸಹ ಕಲಾವಿದರನ್ನೂ ಕೂರಿಸಿಕೊಂಡು ಬೇಕು ಅಂತನೇ ತಡ ಮಾಡುತ್ತಿದ್ದರು.
* ಟೀಮ್ ನಲ್ಲಿ ಅವರ ಬಗ್ಗೆ ಗಾಸಿಪ್ ಮಾಡ್ತಾರೆ ಅಂತ ಕೆಲ ದಿನಗಳ ಕಾಲ ಶೂಟಿಂಗ್ ಗೆ ಬರಲೇ ಇಲ್ಲ. ಮನೆಗೆ ಹೋಗಿ ಮನವಿ ಮಾಡಿಕೊಂಡು ಕರೆದುಕೊಂಡು ಬಂದೆವು.
* ಸ್ಟಾರ್ ಹೋಟೆಲ್ ನಿಂದ ಊಟ ಬರಬೇಕು ಎಂದು ಗಲಾಟೆ ಮಾಡಿದರು. ಸ್ಟಾರ್ ಹೋಟೆಲ್ ನಲ್ಲಿ ಅವರ ಬಿಲ್ ಎರಡು ಲಕ್ಷ ಆಗಿತ್ತು.