ತುಮಕೂರು: ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರರೂ ಆದ ರಾಯಸಂದ್ರ ರವಿಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.
ಸೋಮವಾರ ಸಂಜೆಯಿಂದ ತಡರಾತ್ರಿ 12 ಗಂಟೆವರೆಗೂ ತುಮಕೂರು ನಗರದ ಎಸ್ಐಟಿಯಲ್ಲಿರುವ ರವಿಕುಮಾರ್ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ವಾಪಸ್ ಆಗಿದ್ದಾರೆ.
ತುಮಕೂರು ನಗರದ ಎಸ್ಐಟಿಯಲ್ಲಿರುವ ಬಾಡಿಗೆ ಮನೆ, ತುರುವೇಕೆರೆ ತಾಲೂಕಿನ ರಾಯಸಂದ್ರದ ಮನೆ ಹಾಗೂ ರವಿಕುಮಾರ್ ಅವರ ಸಹೋದರಿ ಮನೆ ಮೇಲೆ ಏಕಕಾಲಕ್ಕೆ ಸುಮಾರು 15 ಜನ ಅಧಿಕಾರಿಗಳಿಂದ ದಾಳಿ ನಡೆದಿದೆ.
ರಾಯಸಂದ್ರ ರವಿ ಕಳೆದ ಬಾರಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕ್ಲಾಸ್ ಒನ್ ಗುತ್ತಿಗೆದಾರರಾಗಿರುವ ರವಿಕುಮಾರ್ ಹಲವು ವ್ಯವಹಾರಗಳನ್ನು ಹೊಂದಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು, ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ತುಮಕೂರು ಐಟಿ ಕಚೇರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ. ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಅನಾಮಧೇಯ ದೂರು ಐಟಿ ಇಲಾಖೆಗೆ ತಲುಪಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.