– 1.39 ಲಕ್ಷ ರೂ. ನಗದು ಜಪ್ತಿ ಮಾಡಿದ ಐಟಿ ಅಧಿಕಾರಿಗಳು
ಶಿವಮೊಗ್ಗ: ಮಾಜಿ ಶಾಸಕ, ಜೆಡಿಎಸ್ ಮುಖಂಡ ಅಪ್ಪಾಜಿ ಗೌಡ ಅವರ ಪುತ್ರ ಅಜಿತ್ ಕುಮಾರ್ ಮತದಾರರಿಗೆ ಹಣ ಹಂಚುತ್ತಿದ್ದಾಗಲೇ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಭದ್ರಾವತಿಯ ಎಂಪಿಎಂ – ಸುರಗಿ ತೋಪಿನಲ್ಲಿ ಅಜಿತ್ ಕುಮಾರ್ ಹಣ ಹಂಚುತ್ತಿದ್ದರು. ಈ ಕುರಿತು ಐಟಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೀಗಾಗಿ ಎಂಪಿಎಂ ಠಾಣೆಯ ಪೊಲೀಸರ ಸಹಕಾರದಿಂದ ದಾಳಿ ಮಾಡಿದ ಅಧಿಕಾರಿಗಳು 1.39 ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಇದನ್ನು ಓದಿ: ಶಿವಮೊಗ್ಗಕ್ಕೆ ಹೊರಟಿದ್ದ ಕಾರಿನ ಸ್ಟೆಪ್ನಿಯಲ್ಲಿತ್ತು 2.30 ಕೋಟಿ ರೂ.!
ಅಜಿತ್ ಕುಮಾರ್ ಬೆಳಗ್ಗೆಯಿಂದಲೇ ಭದ್ರಾವತಿಯ ವಿವಿಧ ಗ್ರಾಮಗಳಿಗೆ ತೆರಳಿ ಮತದಾರರಿಗೆ ಹಣ ಹಂಚುತ್ತಿದ್ದರು. ಮಧ್ಯಾಹ್ನ ಎಂಪಿಎಂ- ಸುರಗಿ ತೋಪಿಗೆ ಬಂದಾಗ ಐಟಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮಂಗಳವಾರ ನಡೆಯಲಿದ್ದು, ಕುರುಡು ಕಾಂಚಣ ಭಾರೀ ಸದ್ದು ಮಾಡುತ್ತಿದೆ. ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಭದ್ರಾವತಿಗೆ ಕಾರಿನ ಸ್ಟೆಪ್ನಿ ಟೈರ್ ಒಳಗಡೆ ಸಾಗಿಸುತ್ತಿದ್ದ 2.30 ಕೋಟಿ ರೂ.ವನ್ನು ಶನಿವಾರ ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಪ್ರಕರಣಕ್ಕೆ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಭದ್ರಾವತಿ ಮಾಜಿ ಶಾಸಕ ಅಪ್ಪಾಜಿ ಗೌಡ ಅವರಿಗೆ ಐಟಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾಜಿ ಶಾಸಕರ ಓರ್ವ ಆಪ್ತನನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.