ಬೆಂಗಳೂರು: ಇನ್ನೆರಡು ದಿನಗಳಲ್ಲಿ ಅಸ್ತಿತ್ವಕ್ಕೆ ಬರಲಿರೋ ನೂತನ ಸರ್ಕಾರದ ಮೇಲೆ ಸಿದ್ದರಾಮಯ್ಯ ಹಿಡಿತ ಸಾಧಿಸಲು ಮುಂದಾಗಿದ್ದಾರಾ ಎನ್ನುವ ಪ್ರಶ್ನೆ ಎದ್ದಿದೆ.
ಎರಡು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎನ್ನುವ ಬೇಡಿಕೆಯ ಹಿಂದೆ ಇರೋದು ಮಾಜಿ ಸಿಎಂ ಸಿದ್ದರಾಮಯ್ಯ ಎನ್ನಲಾಗಿದೆ. ಅದರಲ್ಲೂ ನಾನು ಹೇಳಿದವರನ್ನೇ ಉಪಮುಖ್ಯಮಂತ್ರಿ ಮಾಡಬೇಕು ಎನ್ನುವ ಹಠಕ್ಕೆ ಬಿದ್ದಿದ್ದಾರೆ.
ಸದ್ಯ ಡಿಸಿಎಂ ಸ್ಥಾನಕ್ಕೆ ಲಿಂಗಾಯತ ಸಮುದಾಯದಿಂದ ಎಂ.ಬಿ ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ ಹೆಸರು ಕೇಳಿ ಬರುತ್ತಿದೆ. ಎಂ.ಬಿ ಪಾಟೀಲ್ರನ್ನು ಡಿಸಿಎಂ ಮಾಡಬಾರದು ಎಂದು ವೀರಶೈವರು ಹೇಳುತ್ತಿದ್ದರೆ, ಶಾಮನೂರು ಶಿವಶಂಕರಪ್ಪಗೆ ಕೊಡಬಾರದು ಎಂದು ಲಿಂಗಾಯತರು ಪಟ್ಟು ಹಿಡಿದಿದ್ದಾರೆ.
ಸಿದ್ದರಾಮಯ್ಯ ಇದೇ ಅಂಶವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದು, ಎಸ್ಆರ್ ಪಾಟೀಲ್ ಹೆಸರನ್ನು ತೇಲಿ ಬಿಟ್ಟಿದ್ದಾರೆ. ಈ ಹಿಂದೆ ಎಸ್ಆರ್ ಪಾಟೀಲ್ರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿಸಲು ಸಹ ಸಿದ್ದರಾಮಯ್ಯ ಪ್ರಯತ್ನಿಸಿದ್ದರು.