ಚಾಮರಾಜನಗರ: ನನ್ನನ್ನು ಹಿಂದೂ ಧರ್ಮದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ನಾನು ಹಿಂದೂ ವಿರೋಧಿಯಲ್ಲ. ಇವತ್ತು ಮೋದಿಯಷ್ಟೆ ಅಲ್ಲ, ನಾಳೆ ರಾಹುಲ್ ಗಾಂಧಿ ಪ್ರಧಾನಿಯಾದರೂ ಕೇಳಿದ ಪ್ರಶ್ನೆಗೆ ಉತ್ತರಕೊಡಿ ಎನ್ನುತ್ತೇನೆ. ಪ್ರಶ್ನೆ ಕೇಳುವುದು ನನ್ನ ಹಕ್ಕು ಎಂದು ಬಹುಭಾಷಾನಟ ಪ್ರಕಾಶ್ ರೈ ಹೇಳಿದ್ದಾರೆ.
ನಗರದ ಅಮೃತಭೂಮಿಯಲ್ಲಿ ರಾಜ್ಯ ರೈತ ಸಂಘ ಆಯೋಜಿಸಿದ್ದ ಯುವ ರೈತರ ಅಧ್ಯಯನ ಶಿಬಿರದಲ್ಲಿ ಮಾತನಾಡಿದ ರೈ, ಇನ್ನು 20 ವರ್ಷ ಕಳೆದರೆ ಸರ್ಕಾರವೇ ಸ್ಟೈಪಂಡ್ ನೀಡಿ, ನೀವು ರೈತರಾಗಿ ಅನ್ನೋ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ರೈತ ಚಳುವಳಿಯನ್ನು ಯಾರೋ ಹೈಜಾಕ್ ಮಾಡಲು ಬಿಡಬಾರದು ಎಂದು ಕರೆ ನೀಡಿದ ಅವರು ತಾವು ರೈತ ಚಳುವಳಿಗೆ ಬೆಂಬಲವಾಗಿ ನಿಲ್ಲುವುದಾಗಿ ಹೇಳಿದರು.
ಇತ್ತೀಚೆಗೆ ಭೂಮಿಯಲ್ಲಿ ಹೆಚ್ಚೆಚ್ಚು ಬೆಳೆಯಬೇಕೆಂಬ ದುರಾಸೆ ಹೆಚ್ಚಾಗಿದೆ. ಹೆಚ್ಚು ಒತ್ತಡದಿಂದಾಗಿ ಭೂಮಿ ಹಾಳಗತೊಡಗಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ. ಹೀಗಾಗಿಯೇ ರೈತರಿಗೆ ಸಾಲ ಮನ್ನಾ ಮಾಡಿ ಎಂದು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ ಎಂದು ಅಸಮಧಾನ ಹೊರ ಹಾಕಿದರು. ಇದೇ ವೇಳೆ ನಟ ದುನಿಯಾ ವಿಜಯ್ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv