ಗುರುವಾರವಷ್ಟೇ ಅದ್ಧೂರಿಯಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಸಪ್ತಪದಿ ತುಳಿದಿದ್ದಾರೆ ಲೇಡಿ ಸೂಪರ್ ಸ್ಟಾರ್ ನಯನತಾರ. ಮದುವೆಯ ನಂತರ ತಾವು ಆರಾಧಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಈ ಜೋಡಿ ಹೋಗಿತ್ತು. ಅಲ್ಲಿ ನಯನತಾರಾ ಎಡವಟ್ಟು ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನಯನತಾರಾ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ತಿರುಪತಿ ತಿರುಮಲ ಅಧಿಕಾರಿಗಳ ಮಧ್ಯಪ್ರವೇಶ ಕೂಡ ಆಗಿದೆ.
ನಿನ್ನೆ ಪತಿ ವಿಘ್ನೇಶ್ ಶಿವನ್ ಜೊತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ನಯನತಾರಾ. ಈ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣಕ್ಕೆ ಪ್ರವೇಶ ಮಾಡಿದರು. ಹಳದಿ ಬಣ್ಣದ ಸೀರೆಯಲ್ಲಿ ನಯನತಾರಾ ಕಂಗೊಳಿಸುತ್ತಿದ್ದರೆ, ಬಿಳಿ ಬಣ್ಣದ ಅಂಗಿ ಮತ್ತು ಪಂಚೆ ತೊಟ್ಟಿದ್ದರು ವಿಘ್ನೇಶ್. ಆದರೆ, ನಯನತಾರಾ ದೇವಸ್ಥಾನದ ಆವರಣದ ಒಳಗೆ ಚಪ್ಪಲಿ ಧರಿಸಿದ್ದರು ಎನ್ನುವುದೇ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಹಿಂದಿ ವೆಬ್ ಸಿರೀಸ್ನಲ್ಲಿ `ರಂಗಿತರಂಗ’ ನಟಿ ರಾಧಿಕಾ ನಾರಾಯಣ್
ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಚಪ್ಪಲಿ ಧರಿಸಿದ್ದರಂತೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ನಯನತಾರಾ ವಿರುದ್ಧ ಭಕ್ತರು ಮುಗಿಬಿದ್ದಿದ್ದರು. ವಿವಾದ ಸೃಷ್ಟಿ ಆಗುತ್ತಿದ್ದಂತೆಯೇ ತಿರುಮಲ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ, ನಯನತಾರಾ ಚಪ್ಪಲಿ ಧರಿಸಿ ಓಡಾಡಿದ ಸ್ಥಳದಲ್ಲಿ ಭಕ್ತರಿಗೆ ಪಾದರಕ್ಷೆಗಳನ್ನು ತೊಡಲು ಅವಕಾಶವಿದೆ ಎಂದು ಹೇಳಿದ್ದಾರೆ.