ಲಕ್ನೋ: ರಾಹುಲ್ ಗಾಂಧಿ (Rahul Gandhi) ಅವರು ʻಇಂಡಿಯಾʼ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾ? ಪ್ರಧಾನಿ ಮೋದಿಯಂತಹ ವ್ಯಕ್ತಿಯೊಂದಿಗೆ ಚರ್ಚೆ ಮಾಡಲು ಸಾಧ್ಯವೇ? ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ವ್ಯಂಗ್ಯವಾಡಿದ್ದಾರೆ.
ಲೋಕಸಭಾ ಚುನಾವಣೆಗೆ Lok Sabha Election) ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಕುರಿತು ಪ್ರಧಾನಿ ಮೋದಿ (PM Modi) ಅವರೊಂದಿಗೆ ಸಾರ್ವಜನಿಕ ಚರ್ಚೆಗೆ ಆಹ್ವಾನ ಸ್ವೀಕರಿಸಿದ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಲೇವಡಿ ಮಾಡಿದ್ದಾರೆ.

ಬಿಜೆಪಿಯ ಓರ್ವ ಸಾಮಾನ್ಯ ಕಾರ್ಯಕರ್ತನ ವಿರುದ್ಧ ಸ್ಪರ್ಧಿಸಲು ಧೈರ್ಯವಿಲ್ಲದವರು ಬಡಾಯಿ ಕೊಚ್ಚಿಕೊಳ್ಳುವುದನ್ನು ಬಿಡಬೇಕು. ಮೋದಿ ಅವರೊಂದಿಗೆ ಕುಳಿತು ಚರ್ಚಿಸುವುದಕ್ಕೂ ಒಂದು ಘನತೆ ಇರಬೇಕು. ರಾಹುಲ್ ಗಾಂಧಿ ಅವರೇನು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯೇ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ‘ಲೋಕ’ ಚುನಾವಣೆಯಲ್ಲಿ ಎಎಪಿ ಗೆದ್ದರೆ ವಿದ್ಯುತ್, ಆರೋಗ್ಯ ಸೇವೆ ಉಚಿತ – 10 ಗ್ಯಾರಂಟಿ ಘೋಷಿಸಿದ ಕೇಜ್ರಿವಾಲ್

ಪ್ರಧಾನಿ ಮೋದಿ ಚರ್ಚೆ ಕುರಿತು ರಾಗಾ ಹೇಳಿದ್ದೇನು?
ಲೋಕಸಭಾ ಚುನಾವಣಾ ವಿಷಯಗಳ ಕುರಿತು ಬಹಿರಂಗ ಚರ್ಚೆಗೆ ನಾನು ಸಿದ್ಧ, ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದು, ನಿವೃತ್ತ ನ್ಯಾಯಮೂರ್ತಿಗಳು, ಪತ್ರಕರ್ತರು ನೀಡಿದ ಆಹ್ವಾನ ಸ್ವೀಕರಿಸಿದ್ದಾರೆ. ನಿವೃತ್ತ ನ್ಯಾ.ಮದನ್ ಲೋಕೂರ್, ನಿವೃತ್ತ ನ್ಯಾ.ಅಭಿಜಿತ್ ಪಿ.ಶಾ, ಹಿರಿಯ ಪತ್ರಕರ್ತ ಎನ್.ರಾಮ್ ಅವರ ಆಹ್ವಾನಕ್ಕೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ‘‘ನಿಮ್ಮ ಆಹ್ವಾನದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಮಾಲೋಚಿಸಿರುವೆ. ಇಂಥ ವೇದಿಕೆಗಳಲ್ಲಿ ಚರ್ಚೆಗೆ ಅವರು ಒಪ್ಪಿದ್ದಾರೆ. ಚರ್ಚೆಯಲ್ಲಿ ಪಾಲ್ಗೊಳ್ಳಲು ನಾವು ಸಿದ್ಧವಾಗಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಚರ್ಚೆಯಲ್ಲಿ ಭಾಗವಹಿಸಬೇಕೆಂದು ದೇಶದ ಜನ ನಿರೀಕ್ಷಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಇಂತಹ ಚರ್ಚೆಗಳಿಂದ ದೇಶದ ರಾಜಕೀಯ ನಾಯಕರ ದೃಷ್ಟಿಕೋನದ ಬಗ್ಗೆ ಜನತೆ ಅರ್ಥ ಮಾಡಿಕೊಳ್ಳಲು ನೆರವಾಗಲಿದೆ. ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳ ನೈಜತೆ ತಿಳಿಯಲು ಸಹಕಾರಿಯಾಗಲಿದೆ. ಚುನಾವಣಾ ಪ್ರಚಾರದಲ್ಲಿ ರಾಜಕೀಯ ನಾಯಕರ ನೀತಿ ನಿಲುವುಗಳ ಬಗ್ಗೆ ಜನರಿಗೆ ಅರ್ಥ ಮಾಡಿಕೊಳ್ಳಲು ಚರ್ಚೆಗಳು ಸಹಕಾರಿಯಾಗಲಿವೆ, ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ – ಚುನಾವಣಾಧಿಕಾರಿಗಳ ವಿರುದ್ಧ `ಕೈ’ ಕಿಡಿ!
ಖರ್ಗೆ ವಿರುದ್ಧವೂ ವಾಗ್ದಾಳಿ:
ಕಾಂಗ್ರೆಸ್ ಜನರ ಸಂಪತ್ತು ಮರುಹಂಚಿಕೆ ಬಗ್ಗೆ ಮಾತನಾಡುತ್ತಿದೆ. ಈ ನಿರ್ಧಾರದ ಮೂಲಕ ನಾಗರಿಕರ ಅರ್ಧದಷ್ಟು ಆಸ್ತಿಯನ್ನು ಕಸಿದುಕೊಳ್ಳಲಿದೆ ಎಂಬುದನ್ನು ತೋರಿಸಿದೆ. ರಾಮ ಮಂದಿರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ಮಾತನಾಡುತ್ತದೆ. ಈ ಎಲ್ಲಾ ಸಮಸ್ಯೆಗಳು ರಾಷ್ಟ್ರೀಯ ಸಮಸ್ಯೆಗಳು. ಇದರ ಬಗ್ಗೆ ಪ್ರಧಾನಿ ಮಾತ್ರವಲ್ಲ, ಪ್ರತಿಯೊಬ್ಬ ನಾಗರಿಕರಿಗೂ ಪ್ರಶ್ನೆ ಮಾಡುವ ಹಕ್ಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.












