ಸೋಷಿಯಲ್ ಮೀಡಿಯಾದಲ್ಲಿ ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಅವಹೇಳನ ಮಾಡಿರುವ ವಿಷಯಕ್ಕೆ ಸಾರ್ವಜನಿಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲೂ ಮಹಿಳಾ ಬರಹಗಾರರು ಮತ್ತು ಕಲಾವಿದರು ಧ್ವನಿ ಎತ್ತಿದ್ದಾರೆ. ಈ ಕುರಿತಂತೆ ತಮ್ಮದೇ ಆದ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್ಕುಮಾರ್ (Ashwini Puneeth Rajkumar) ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದವರ ವಿರುದ್ಧ ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ. ಆರ್ಸಿಬಿ (RCB) ಸೋಲಿಗೆ ಅಶ್ವಿನಿ ಅವರೇ ಕಾರಣ ಎಂದು ನಿಂದಿಸಿದ ಅನಾಮಿಕ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕಳೆದ ಮಾರ್ಚ್ ತಿಂಗಳು 19ನೇ ತಾರೀಕಿನಂದು ಬೆಂಗಳೂರಿನ ಆರ್ಸಿಬಿ ಅನ್ಬಾಕ್ಸ್ ಇವೆಂಟ್ನಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರನ್ನು ಆಹ್ವಾನಿಸಿದ್ದರು. ಅದರಂತೆ ಅಶ್ವಿನಿ ಅವರು ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದಾದ ನಂತರ ಐಪಿಎಲ್ ಪ್ರಾರಂಭವಾಗಿ ಆರ್ಸಿಬಿ ತಂಡ ಕೆಲ ಪಂದ್ಯಗಳಲ್ಲಿ ಸೋತಿದೆ. ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ‘ಗಜಪಡೆ’ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಆರ್ಸಿಬಿ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ತಂಡ ಸೋತಿದೆ ಎಂದು ನಿಂದಿಸಲಾಗಿದೆ. ಅಭಿಮಾನಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ `ಸುದೀಪ್ ಅಭಿಮಾನಿ’ ಎಂದು ಖಾತೆಯ ಹೆಸರು ಬದಲಿಸಿದ್ದಾರೆ. ಇದರ ವಿರುದ್ಧ ಅಪ್ಪು ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಕಾನೂನು ಸಮರ ಸಾರಿದ್ದಾರೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಬಗ್ಗೆ ಬರೆದ ಕೀಳು ಮಟ್ಟದ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಕಮಿಷನರ್ ಭೇಟಿ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ.
ಸಾಕಷ್ಟು ಬಾರಿ ಈ ಫ್ಯಾನ್ಸ್ ವಾರ್ ಕನ್ನಡದಲ್ಲಿ ನಡೆದಿದೆ. ಅದಕ್ಕೆ ಫುಲ್ ಸ್ಟಾಪ್ ಹಾಕುವಂತೆ ಸ್ವತಃ ದರ್ಶನ್ ಅವರೇ ಈ ಹಿಂದೆ ವಿಡಿಯೋ ಮೂಲಕ ಮನವಿ ಮಾಡಿದ್ದರು. ತಮ್ಮ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬೇರೆಯ ನಟರ ಅಥವಾ ಅಭಿಮಾನಿಗಳನ್ನು ನಿಂದಿಸಬಾರದು ಎಂದು ಮನವಿ ಮಾಡಿದ್ದರು. ಆದರೂ, ಪದೇ ಪದೇ ಇಂತಹ ಘಟನೆಗಳು ನಡೆಯುತ್ತಲೇ ಇವೆ.