ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್ ನೆಟ್ಟಾರು (Praveen Nettaru) ಪ್ರಕರಣವನ್ನು ಭಯೋತ್ಪಾದನಾ ಘಟನೆ ಎಂದು ತಿರುಚಲು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಸೂಚಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಗಂಭೀರ ಆರೋಪ ಮಾಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಎಫ್ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಎನ್ಐಎ ದಾಳಿ ವೇಳೆ ಭಯೋತ್ಪಾದಕರನ್ನು ಹಿಡಿಯುವ ರೀತಿ ವಾತಾವರಣ ಸೃಷ್ಟಿಸಲಾಗಿದೆ. ಪ್ರವೀಣ್ ಕೇಸ್ ಅಂತಾರಾಜ್ಯ ನಂಟಿನ ಕೇಸ್ ಅಂತ ಗೃಹ ಸಚಿವರು ಹೇಳಿದ್ದರು. ಆದರೆ ಆರೋಪಿಗಳ ಬಂಧನ ಆದ ನಂತರ ಅದು ಸ್ಥಳೀಯರು ಅಂತ ಗೊತ್ತಾಗಿದೆ. ಈ ಪ್ರಕರಣವನ್ನು ನಾವು ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ ಎಂದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಹೇಗಿದೆ?- 144 ಕ್ಷೇತ್ರಗಳ ಮೇಲೆ ಮೋದಿ ಕಣ್ಣು
ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಮಸೂದ್ ಹತ್ಯೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪ್ರವೀಣ್ ನೆಟ್ಟಾರು ಪ್ರಕರಣ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣವಾಗಿದ್ದು ಸ್ಥಳೀಯ ಪೊಲೀಸರೇ ಆರೋಪಿಗಳನ್ನು ಬಂಧಿಸಿದ್ದಾರೆ. ಸರ್ಕಾರಕ್ಕೆ ಪ್ರವೀಣ್ ಕೇಸಲ್ಲಿ ಮಾತ್ರ ಯಾಕೆ ಆಸಕ್ತಿ? ಮಸೂದ್ ಮತ್ತು ಫಾಜಿಲ್ ಕೇಸ್ನಲ್ಲಿ ಆಸಕ್ತಿ ಯಾಕಿಲ್ಲ ಎಂದು ಪ್ರಶ್ನಿಸಿದರು.
ಮಂಗಳವಾರ 30ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ನಮ್ಮ ತಾಲೂಕು ಘಟಕದ ಕೆಲ ನಾಯಕರ ಮನೆಗಳಿಗೆ ದಾಳಿ ನಡೆಸಿ ಕೆಲ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಎನ್ಐಎ ಹೇಳಿದೆ. ಶಸ್ತ್ರಾಸ್ತ್ರಗಳನ್ನು ಬೆಂಗಳೂರಿನಿಂದ ತಂದಿದ್ದಾರಾ? ದೆಹಲಿಯಿಂದ ತಂದಿದ್ದಾರಾ ಎಂಬುದನ್ನು ಎನ್ಐಎ ಹೇಳಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಹಾಲ್ಗಳಲ್ಲಿ ನಮ್ಮ ಸಭೆಗಳು ನಡೆಯುತ್ತದೆ. ಅದೇ ರೀತಿ ಪೊಲೀಸರಿಗೆ ಮಾಹಿತಿ ನೀಡಿ ಮಿತ್ತೂರಿನ ಕಮ್ಯುನಿಟಿ ಹಾಲ್ನಲ್ಲೂ ಸಭೆ ಮಾಡಿದ್ದೇವೆ. ಪ್ರವೀಣ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ಎನ್ಐಎಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಫಸ್ಟ್ ಟೈಂ ಪೆಟ್ಟಿಗೆಯಲ್ಲಿ ಹೂಳುವ ಸಂಪ್ರದಾಯ ಕೈಬಿಟ್ಟ ಕೇರಳ ಚರ್ಚ್
ಪಿಎಫ್ಐ ನಾಯಕರು ಎಂಬ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್ ಕೇಸ್ ಎನ್ಐಎಗೆ ವಹಿಸಲಾಗಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಕೇಸ್ ನಲ್ಲಿ ಸಂಘಪರಿವಾರ ಇದೆ. ಆದರೆ ಇದನ್ನು ಯಾಕೆ ಸರ್ಕಾರ ಎನ್ಐಎಗೆ ವಹಿಸಿಲ್ಲ? ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸ್ತಿದೆ ಎಂದು ಅಶ್ರಫ್ ದೂರಿದರು.
ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡಲು ಎನ್ಐಎಗೆ ನೀಡಿದೆ. ಕೆಲ ಪಿಎಫ್ ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ ನಡೆಸಲಾಗಿದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರ ವೈಫಲ್ಯತೆ ಮುಚ್ಚಿ ಹಾಕಲು ಈ ಕೆಲಸ ಮಾಡಿದೆ ಎಂದು ಹೇಳಿದರು.