ನವದೆಹಲಿ: ಆದಾಯ ತೆರಿಗೆ ಇಲಾಖೆಯು (Income Tax Department) ಒಡಿಶಾ ಮತ್ತು ಜಾರ್ಖಂಡ್ನ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್ (BDPL) ಕಚೇರಿ ಮತ್ತು ಕಂಪನಿಗೆ ಸಂಪರ್ಕ ಹೊಂದಿದ ಅನೇಕ ಸ್ಥಳಗಳ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಹಣವನ್ನು ವಶಕ್ಕೆ ಪಡೆದಿದೆ.
ಇಲ್ಲಿಯವರೆಗೆ 200 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಭಾರೀ ಪ್ರಮಾಣದಲ್ಲಿ ನೋಟುಗಳ ಸಂಖ್ಯೆ ಇದ್ದ ಕಾರಣ ನೋಟು ಎಣಿಸುವ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಐಟಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮತ್ತೆ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ
ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಬುಧವಾರ ಬಿಡಿಪಿಎಲ್ ಸೇರಿದ ಕೋಲ್ಕತ್ತಾ ಮತ್ತು ರಾಂಚಿಯಲ್ಲಿನ ನೋಂದಾಯಿತ ಕಚೇರಿಗಳು ಸೇರಿದಂತೆ ಬೌಧ್, ಬೋಲಂಗಿರ್, ರಾಯ್ಗಢ ಮತ್ತು ಸಂಬಲ್ಪುರದಲ್ಲಿನ ಡಿಸ್ಟಿಲರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿಗಳನ್ನು ನಡೆಸಲಾಗಿತ್ತು. ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕರ ನಿವಾಸಗಳ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಒಡಿಶಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಿಡಿಪಿಎಲ್ ಒಡಿಶಾದಾದ್ಯಂತ ಕಾರ್ಯನಿರ್ವಹಿಸುತ್ತದೆ. ಪ್ರಸ್ತುತ ಹಲವು ಸ್ಥಳಗಳಲ್ಲಿ ದಾಳಿ ನಡೆಯುತ್ತಿದ್ದು, ತೆರಿಗೆ ವಂಚನೆಯ ನಿಖರ ಮೊತ್ತ ಇನ್ನೂ ಬಹಿರಂಗವಾಗಿಲ್ಲ.
2019 ರಿಂದ 2021 ರ ಹಣಕಾಸು ವರ್ಷದಲ್ಲಿ ಕಂಪನಿ ಕಡಿಮೆ ಆದಾಯ ತೋರಿಸಿತ್ತು. ಲೆಕ್ಕ ಪತ್ರದಲ್ಲಿ ತೋರಿಸಲಾದ ಅನುಮಾನಾಸ್ಪದ ಇತರ ಪಾವತಿಗಳ ಬಗ್ಗೆ ಈಗ ಐಟಿ ತನಿಖೆ ನಡೆಸುತ್ತಿದೆ.