ಚಿತ್ರದುರ್ಗ: ರಾಜ್ಯ ಸಮಾಜ ಕಲ್ಯಾಣ ಸಚಿವರ ತವರೂರಲ್ಲೇ ಇಂದಿಗೂ ಮೌಢ್ಯ, ಕಂದಾಚಾರಗಳು ಜೀವಂತವಾಗಿರುವುದನ್ನು ಕಾಣಬಹುದಾಗಿದೆ.
ಜಿಲ್ಲೆಯ ಜಂಪಣ್ಣ ನಾಯ್ಕನ ಕೋಟೆಯ ಗೊಲ್ಲನ ಕಟ್ಟೆ ಗ್ರಾಮದಲ್ಲಿ 20 ಗೊಲ್ಲ ಕುಟುಂಬಗಳು ಇತರ ಸಮುದಾಯದ ಜೊತೆ ಸೇರದೆ ಪ್ರತ್ಯೇಕವಾಗಿದ್ದಾರೆ. ಇಲ್ಲಿ ಇಂದಿಗೂ ಬಾಲಕಿಯರು ಋತುಮತಿಯಾದರೆ ಒಂದು ವಾರಗಳ ಕಾಲ ಕಡ್ಡಾಯವಾಗಿ ಮನೆಯಿಂದ ಹೊರಗಿರಬೇಕು.
ಈ ಸಂದರ್ಭದಲ್ಲಿ ಇಲ್ಲಿನ ಯುವತಿಯರು, ಮಹಿಳೆಯರಿಗೆ ಹಾಲು ಹಾಕಿ ಮಾಡಿದ ಕಾಫಿ-ಟೀ ಕೊಡುವುದಿಲ್ವಂತೆ. ಹೀಗಾಗಿ ಚಳಿಯನ್ನು ತಡೆಯಲಾಗದೇ ಮುಗ್ಧ ಮಹಿಳೆಯರು ಊರ ಹೊರಗಿನ ಪಾಳು ಮನೆಯನ್ನು ಆಶ್ರಯಿಸಿದ್ದಾರೆ. ಇನ್ನು ಕುಡಿಯಲು ನೀರು ಸಿಗದೇ ಪ್ರಾಣಿಗಳಿಗಿಂತ ಹೀನಾಯವಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ.
ಇಲ್ಲಿ ಪೂರ್ವಜರ ಕಾಲದಿಂದಲೂ ಈ ಆಚರಣೆಗಳು ನಡೆದುಕೊಂಡು ಬರುತ್ತಿದೆ. ಒಂದು ವೇಳೆ ಈ ನಿಯಮ ಮೀರಿದರೆ ಮನೆಯ ಯಜಮಾನ ಸಾವನ್ನಪ್ಪುತ್ತಾನೆ ಅಥವಾ ಮನೆಯೊಳಗೆ ಹಾವು, ಚೇಳು ಬಂದು ಪ್ರಾಣ ಹಾನಿ ಮಾಡುತ್ತವೆ ಎಂಬ ಮೌಢ್ಯತೆ ಇಂದಿಗೂ ಈ ಸಮುದಾಯದ ಜನರಲ್ಲಿ ತಳವೂರಿದೆ. ಇದರಿಂದ ಇಲ್ಲಿನ ಮಹಿಳೆಯರು ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.