– ಇಂದು ರೈತರೊಂದಿಗೆ ಕೇಂದ್ರ ಸರ್ಕಾರ ಸಭೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಲು ಪಟ್ಟುಹಿಡಿದು ಪ್ರತಿಭಟಿಸುತ್ತಿರುವ ರೈತರನ್ನು (Farmers) ಹಿಮ್ಮೆಟ್ಟಿಸಲು, ಪೊಲೀಸರು ಹರಸಾಹಸ ಮಾಡುತ್ತಿದ್ದಾರೆ. ಬ್ಯಾರಿಕೇಡ್, ಮುಳ್ಳಿನ ತಂತಿ, ಜಲಫಿರಂಗಿ, ಅಶ್ರುವಾಯು, ಕಾಂಕ್ರೀಟ್ ಬ್ಯಾರಿಕೇಡ್ ಎಲ್ಲಾ ರೀತಿಯ ಅಸ್ತ್ರವನ್ನೂ ಪ್ರಯೋಗಿಸಿದ್ದಾರೆ. ಆದ್ರೆ ಇದ್ಯಾವುದಕ್ಕೂ ಜಗ್ಗದ ಪ್ರತಿಭಟನಾಕಾರರನ್ನ ಹಿಮ್ಮೆಟ್ಟಿಸಲು ʻಶಬ್ದಾಸ್ತ್ರʼ (Sonic Weapons) ಬಳಕೆಗೆ ಪೊಲೀಸರು ಮುಂದಾಗಿದ್ದಾರೆ.
ಹರಿಯಾಣದ ಶಂಭು ಗಡಿಯಲ್ಲೇ ರೈತರನ್ನು ತಡೆದು ನಿಲ್ಲಿಸಲು, ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಆದ್ರೆ ಭದ್ರತೆಯನ್ನು ಭೇದಿಸಲು ರೈತರು ಮುಂದಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಲಾಂಗ್ ರೇಂಜ್ ಅಕೌಸ್ಟಿಕ್ ಡಿವೈಸ್ (LRADS) ಶಬ್ಧಸ್ತ್ರ ಬಳಸಿ ರೈತರನ್ನು ಹಿಮ್ಮೆಟ್ಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ದೆಹಲಿ ಚಲೋ ಪ್ರತಿಭಟನೆ ನಿಗ್ರಹಕ್ಕೆ ಯತ್ನ – ಪೊಲೀಸರ ವರ್ತನೆ ಖಂಡಿಸಿ ಶುಕ್ರವಾರ ದೇಶಾದ್ಯಂತ ರಸ್ತೆ ತಡೆ
ಏನಿದು ಶಬ್ದಾಸ್ತ್ರ?
ಅಮೆರಿಕದ ಮಿಲಿಟರಿ ಪಡೆಗಳು 2000ನೇ ವರ್ಷದ ಆರಂಭದಲ್ಲೇ ಈ ಸಾಧನಗಳನ್ನು ಅಭಿವೃದ್ಧಿ ಪಡಿಸಿವೆ. ವಿವಿಧ ಸಂದರ್ಭಗಳಲ್ಲಿ ಜನಸಮೂಹವನ್ನು ನಿಯಂತ್ರಿಸುವುದು ಮಾತ್ರವಲ್ಲದೇ, ಮೈಕ್ರೋಫೋನ್ ರೀತಿಯಲ್ಲಿ, ರಕ್ಷಣಾ ಸಂದರ್ಭಗಳಲ್ಲೂ ವಿವಿಧೋದ್ದೇಶಗಳಿಗಾಗಿ ಇವುಗಳನ್ನು ಬಳಕೆ ಮಾಡಲಾಗುತ್ತಿದೆ. ಇವುಗಳ ಬೆಲೆ 30 ಲಕ್ಷ ರೂ.ಗಳಷ್ಟಿದೆ. 2013ರಲ್ಲಿ ಇಂಥ 5 LRADS ಗಳನ್ನು ದೆಹಲಿ ಪೊಲೀಸ್ ಇಲಾಖೆ ಖರೀದಿಸಿದೆ. ಈಗ ಪ್ರತಿಭಟನಾಕಾರರನ್ನ ಚದುರಿಸಲು ಅವುಗಳನ್ನು ಬಳಕೆ ಮಾಡುತ್ತಿದೆ. 130 ಡೆಸಿಬಲ್ನಷ್ಟು ಜೋರಾಗಿ ಶಬ್ದವನ್ನು ಇದರಿಂದ ಹೊರಡಿಸಲಾಗುತ್ತದೆ. ಇದು ಅತ್ಯಂತ ಕರ್ಕಶವೆನಿಸುತ್ತದೆ. ಇದನ್ನು ಸಾನಿಕ್ ಅಸ್ತ್ರವೆಂದೂ ಕರೆಯುತ್ತಾರೆ.
ಸಾನಿಕ್ ಅಸ್ತ್ರವಷ್ಟೇ ಅಲ್ಲದೇ, ಗುಂಪು ಚದುರಿಸುವುದಕ್ಕಾಗಿ ಪೊಲೀಸರು ಗುಂಡು ಹಾರಿಸುವುದನ್ನೂ ಅಭ್ಯಾಸ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ – ನಾಮಪತ್ರ ಪ್ರಕ್ರಿಯೆ ಪೂರ್ಣಗೊಳಿಸಿದ ಕಾಂಗ್ರೆಸ್ ವರಿಷ್ಠೆ
ಇಂದು ಕೇಂದ್ರ ಸರ್ಕಾರ ಸಭೆ:
ಕೇಂದ್ರ ಸರ್ಕಾರವು ಗುರುವಾರ ಚಂಡೀಗಢದಲ್ಲಿ ರೈತರೊಂದಿಗೆ ಸಭೆ ನಡೆಸಲಿದೆ. ಅಲ್ಲಿಯವರೆಗೂ ರೈತರು ಶಾಂತ ರೀತಿಯಲ್ಲಿ ಇರಲಿದ್ದಾರೆ ಎಂದು ರೈತಮುಖಂಡರೊಬ್ಬರು ತಿಳಿಸಿದ್ದಾರೆ.