ಚಿಕ್ಕಬಳ್ಳಾಪುರ: ಕಣ್ಣಿಗೆ ಖಾರದಪುಡಿ ಎರಚಿ ವ್ಯಕ್ತಿಯಿಂದ ಏಳೂವರೆ ಲಕ್ಷ ಹಣ ದೋಚಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಘಟನೆ ನಡೆದ ಕೇವಲ 2 ಗಂಟೆಯಲ್ಲಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಶಿವಶಂಕರ ಅರಾಧ್ಯ ಹಣ ಕಳೆದುಕೊಂಡಿದ್ದ ವ್ಯಕ್ತಿ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ವಿನಾಯಕ ನಗರದ ನಿವಾಸಿ ಶಿವಶಂಕರ ಆರಾಧ್ಯ ಹೋಟೆಲ್, ಊಟ ಕ್ಯಾಟರಿಂಗ್ ಕೆಲಸ ಮಾಡಿಕೊಂಡಿದ್ದರು. ಇವರಿಗೆ ವಾಕಿಂಗ್ ಹೋಗಿ ಬರೋವಾಗ ದೂರದ ಸಂಬಂಧಿ ಯುವಕ ಯಶ್ವಂತ್ ಅರಾಧ್ಯನ ಪರಿಚಯವಾಗಿತ್ತು. ಯಶ್ವಂತ್ ಅರಾಧ್ಯ ತಾನು ಯೆಲ್ಲೋ ಬೋರ್ಡ್ ಕಾರು ಇಟ್ಕೊಂಡಿದ್ದು ಲಕ್ಷ ಲಕ್ಷ ದುಡೀತಿದ್ದೀನಿ. ನಿಮಗೂ ಕಡಿಮೆ ಬೆಲೆಗೆ ಕಾರು ಕೊಡಿಸ್ತೀನಿ. ನಾನೇ ಟ್ರಾವೆಲ್ಸ್ಗೆ ಬಿಡಿಸ್ತೀನಿ, ತಿಂಗಳಿಗೆ ಲಕ್ಷ ಲಕ್ಷ ಕೊಡ್ತೀನಿ ಅಂತ ನಯವಾಗಿ ಮಾತನಾಡಿ ಶಂಕರ್ ಅರಾಧ್ಯ ತಲೆಕೆಡಿಸಿದ್ದ. ಈತನ ಮಾತು ನಂಬಿದ ಶಿವಶಂಕರ್ ಅರಾಧ್ಯ ಮನೆಯಲ್ಲಿದ್ದ ಆರೂವರೆ ಲಕ್ಷ ಹಣ ಹಾಗೂ ಒಡವೆಗಳನ್ನ ಅಡಮಾನ ಇಟ್ಟು ಏಳೂವರೆ ಲಕ್ಷ ಹಣ ತಂದು ಕಾರು ತರೋಕೆ ಅಂತ ಮನೆಯಿಂದ ಅಚೆ ಬಂದಿದ್ದ. ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು, ‘ಸರ್ ಈ ಅಡ್ರೆಸ್ ಎಲ್ಲಿ’ ಅಂತ ಕೇಳೋ ನೆಪದಲ್ಲಿ ಬಂದು ಕಣ್ಣಿಗೆ ಖಾರದಪುಡಿ ಎರಚಿ ಕೈಯಲ್ಲಿದ್ದ ಏಳೂವರೆ ಲಕ್ಷ ರೂಪಾಯಿ ಇದ್ದ ಬ್ಯಾಗ್ ಕಿತ್ತಕೊಂಡು ಎಸ್ಕೇಪ್ ಆಗಿದ್ದರು. ಇದನ್ನೂ ಓದಿ: ಬೆಂಗಳೂರಲ್ಲಿ ಖಾಕಿಯಿಂದ ಭರ್ಜರಿ ಶಿಕಾರಿ – ಮನೆಗಳ್ಳರು, ಡ್ರಗ್ ಪೆಡ್ಲರ್ಸ್ ಸೇರಿ 10 ಮಂದಿ ಅರೆಸ್ಟ್
ಒಂದು ಬ್ಯಾಗ್ನಲ್ಲಿ ಆರೂವರೆ ಲಕ್ಷ, ಮತ್ತೊಂದು ಬ್ಯಾಗ್ನಲ್ಲಿ ಏಳೂವರೆ ಲಕ್ಷ ರೂಪಾಯಿ ಇಟ್ಟುಕೊಂಡು ಮನೆಯಿಂದ ಹೊರಬಂದಿದ್ದ ಶಿವಶಂಕರ್ ಅರಾಧ್ಯ ಕಣ್ಣಿಗೆ ಕಾರದ ಪುಡಿ ಎರಚುತ್ತಿದ್ದಂತೆ ಕಳ್ಳ ಕಳ್ಳ ಅಂತ ಚೀರಾಡಿದ್ದಾರೆ. ಕಳ್ಳ ಮತ್ತು ಶಿವಶಂಕರ್ ಆರಾಧ್ಯ ನಡುವೆ ತಳ್ಳಾಟ-ನೂಕಾಟ ಆಗಿ ಒಂದು ಬ್ಯಾಗ್ ಕಿತ್ತುಕೊಂಡಿದ್ದಾನೆ. ಅಷ್ಟರಲ್ಲೇ ಅಡ್ಡಬಂದ ಸಾರ್ವಜನಿಕರಿಗೆ ಲಾಂಗ್ ತೋರಿಸಿ ಅಲ್ಲಿಂದ ಕಾಲ್ಕಿತ್ತಿದ್ದರು. ಆದರೆ, ಇಷ್ಟೆಲ್ಲಾ ಆಗಿದ್ರೂ ಅಲ್ಲೇ ಇದ್ದ ಕಾರು ಕೊಡಿಸ್ತೀನಿ ಅಂತ ಬಂದಿದ್ದ ಯಶ್ವಂತ್ ಕಳ್ಳರನ್ನ ತಡೆಯೋ ಕೆಲಸ ಮಾಡಿಲ್ಲ. ಹೀಗಾಗಿ, ಪೊಲೀಸರು ಬಂದಾಗ ಯಶ್ವಂತ್ ಆಡಿದ ಮಾತುಗಳು ಅನುಮಾನ ಭರಿಸಿವೆ.
ಕೊನೆಗೆ ಯಶ್ವಂತ್ನನ್ನೇ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಆರೋಪಿ ತನ್ನ ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾನೆ. ತಾನೇ ಇಬ್ಬರು ಹುಡುಗರನ್ನ ಕರೆಸಿ ಕಳ್ಳತನ ಮಾಡಿಸಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೊನೆಗೆ ಬೆಂಗಳೂರಿನ ಹೆಬ್ಬಾಳದಿಂದ ಕೆಆರ್ ಪುರಂ ರಸ್ತೆಯೊಂದರಲ್ಲಿ ಕ್ಯಾಶ್ ಸಮೇತ ಇಬ್ಬರು ಕಳ್ಳರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

