– ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಭಾರತೀಯ ಸೇನಾ ಮುಖ್ಯಸ್ಥ
ನವದೆಹಲಿ: ಭಯೋತ್ಪಾದಕರಿಗೆ ಆಶ್ರಯ ನೀಡುವುದು, ಭಾರತದ (India) ವಿರುದ್ಧ ಕಾರ್ಯಾಚರಣೆ ನಡೆಸುವುದನ್ನು ಮುಂದುವರಿಸಿದರೆ, ಭೂಪಟದಲ್ಲಿ ಪಾಕಿಸ್ತಾನ ಇರಬೇಕೆ ಅಥವಾ ಬೇಡವೇ ಅನ್ನೋದನ್ನು ನಾವು ನಿರ್ಧರಿಸುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Upendra Dwivedi) ಎಚ್ಚರಿಸಿದ್ದಾರೆ.
ದೆಹಲಿಯ ಮಾಣೆಕ್ಷಾ ಕೇಂದ್ರದಲ್ಲಿ ‘ಯೂನಿಫಾರ್ಮ್ ಅನ್ವೀಲ್ಡ್’ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಆಪರೇಷನ್ ಸಿಂಧೂರ್ಗೆ ಕಾರಣವಾದ ಸಂದರ್ಭಗಳು ಮತ್ತೆ ಬಂದರೆ ಭಾರತೀಯ ಸೇನೆಯು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದು ಪಾಕಿಸ್ತಾನಕ್ಕೆ (Pakistan) ತಿಳಿದಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ: ಸಿಜೆಐ
ಇತ್ತೀಚೆಗೆ ದೇಶ ಮತ್ತು ಭಾರತೀಯ ಸೇನೆಯು ಆಪರೇಷನ್ ಸಿಂಧೂರ (Operation Sindoor) ಮೊದಲ ವಾರ್ಷಿಕೋತ್ಸವವನ್ನು ಆಚರಿಸಿತು. ಈ ಹಿನ್ನೆಲೆ ನಡೆದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಉಪೇಂದ್ರ ದ್ವಿವೇದಿ ಮಾತನಾಡಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಕಳೆದ ವರ್ಷ ಮೇ 7 ರಂದು ಆಪರೇಷನ್ ಸಿಂಧೂರ ಪ್ರಾರಂಭಿಸಲಾಯಿತು. ಭಾರತೀಯ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಅನೇಕ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದ್ದವು. ಇದನ್ನೂ ಓದಿ: ನೆದರ್ಲೆಂಡ್ಸ್ಗೆ ಪ್ರಧಾನಿ ಮೋದಿ ಭೇಟಿ
ಪಾಕಿಸ್ತಾನವು ಭಾರತದ ವಿರುದ್ಧ ದಾಳಿಗಳನ್ನು ಪ್ರಾರಂಭಿಸಿತು. ನಂತರದ ಎಲ್ಲಾ ಪ್ರತಿದಾಳಿಗಳನ್ನು ಆಪರೇಷನ್ ಸಿಂಧೂರ ಅಡಿಯಲ್ಲಿ ನಡೆಸಲಾಯಿತು. ಪರಮಾಣು ಶಸ್ತ್ರಸಜ್ಜಿತ ನೆರೆಯ ರಾಷ್ಟ್ರಗಳ ನಡುವಿನ ಮಿಲಿಟರಿ ಸಂಘರ್ಷ ಸುಮಾರು 88 ಗಂಟೆಗಳ ಕಾಲ ನಡೆಯಿತು. ಮೇ 10 ರ ಸಂಜೆ ಉಭಯ ದೇಶಗಳು ಒಪ್ಪಂದಕ್ಕೆ ಬಂದು ಸಂಘರ್ಷ ಕೊನೆಗೊಂಡಿತು.

