ಉಡುಪಿ: ರಾಜ್ಯದಲ್ಲಿ ಹಿಜಬ್, ವ್ಯಾಪಾರ ಅಸಹಕಾರ, ಹಲಾಲ್, ವಿಚಾರ ಚರ್ಚೆಯಾಗುತ್ತಿದೆ. ಉಡುಪಿ ಸರ್ಕಾರಿ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳಿಗೆ ಸಾರಿ ಸಾರಿ ಹೇಳಿದರೂ ಅವರು ಕೇಳಲಿಲ್ಲ. ಆ ನಂತರ ಮುಸಲ್ಮಾನ ಸಮಾಜ ನಡೆದುಕೊಂಡ ರೀತಿ, ಬಂದ್ ಕರೆ ಇದಕ್ಕೆಲ್ಲ ಕಾರಣ ಎಂದು ಶಾಸಕ ರಘುಪತಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಉಡುಪಿ ಶಾಸಕ, ರಾಜ್ಯದಲ್ಲಿ ನಡೆಯುತ್ತಿರುವ ಪ್ರಸಕ್ತ ಬೆಳವಣಿಗೆಗಳಿಗೆ ಕಾರಣ ಏನು ಎಂದು ವಿಮರ್ಶೆ ಮಾಡಿದರು. ತ್ರಿಸದಸ್ಯ ಪೀಠದ ತೀರ್ಪಿನ ನಂತರ ಭಟ್ಕಳದಲ್ಲಿ ಹಿಂದೂಗಳ ಅಂಗಡಿಯನ್ನು ಬಲವಂತವಾಗಿ ಬಂದ್ ಮಾಡಿಸಲಾಯ್ತು. ಎಲ್ಲಾ ಘಟನೆಗಳು ಹಿಂದೂಗಳ ಭಾವನೆಯನ್ನು ಕೆರಳಿಸಿವೆ. ಹಿಂದೂಗಳು ವ್ಯಾಪಾರ, ಹಲಾಲ್ ಮತ್ತಿತರ ವಿಚಾರವನ್ನು ಚರ್ಚೆಗೆ ತಂದರು. 2002ರ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಕಾನೂನನ್ನು ಜಾರಿಗೆ ತರಲು ಒತ್ತಾಯಿಸಿದರು ಎಂದರು.
ಎರಡು ಸಮಾಜ ಒಟ್ಟಾಗಿ ಸೌಹಾರ್ದತೆಯಿಂದ ಹೋಗಬೇಕಾದ ಅವಶ್ಯಕತೆ ಇದೆ. ಮುಸಲ್ಮಾನ ಸಮಾಜ ಹಿಜಬ್ ವಿಚಾರವನ್ನು ಮೊದಲು ಕ್ಲೀಯರ್ ಮಾಡಿಕೊಳ್ಳಬೇಕು. ನಾವೀಗ 21ನೇ ಶತಮಾನದಲ್ಲಿದ್ದೇವೆ. ಈಗಲೂ ಧರ್ಮವೇ ಮುಖ್ಯ ಎಂದು ಪಟ್ಟು ಹಿಡಿದಿದ್ದಾರೆ. ಯಾವುದೇ ಹೊಂದಾಣಿಕೆ ಮಾಡಿಕೊಳ್ಳಲು ಆಗದಿದ್ದಾಗ ಹಿಂದೂಗಳು ಕೂಡ ತಮಗೆ ಧರ್ಮವೇ ಮುಖ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಆನ್ಲೈನ್ನಲ್ಲಿ ಆಯ್ಕೆ ನೀಡಿ – ಹಲಾಲ್ ವಿರುದ್ಧ ಕತ್ತಿಗೆ ಸಂಬರಗಿ ಪತ್ರ
ಶಬರಿಮಲೆ ತೀರ್ಪು ವಿರುದ್ಧ ಕೇರಳದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆ ಮಾಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಪ್ರಕರಣವನ್ನು ಹಿಜಬ್ ಪ್ರಕರಣದ ಜೊತೆ ಹೋಲಿಸಬೇಡಿ. ದೇವಸ್ಥಾನದ ಧಾರ್ಮಿಕ ಆಚರಣೆಗೂ ಕಾಲೇಜಿನ ಸಮವಸ್ತ್ರಕ್ಕೂ ಹೋಲಿಕೆ ಸರಿಯಲ್ಲ. ರಾಜ್ಯದ ಹೈಕೋರ್ಟ್ ತೀರ್ಪಿಗೆ ಶಬರಿಮಲೆ ತೀರ್ಪಿಗೂ ಹೋಲಿಕೆ ಸರಿಯಲ್ಲ. ಮಸೀದಿ, ಚರ್ಚ್, ದೇವಸ್ಥಾನದ ಆಚರಣೆಗೆ ವಿರುದ್ಧವಾಗಿ ತೀರ್ಪು ಬಂದರೆ ವಿರೋಧಿಸಬಹುದು. ಸಾರ್ವಜನಿಕ ಸಂಸ್ಥೆಯಲ್ಲಿ ನಿಯಮ ಪಾಲಿಸದಿರುವುದು ಸರಿಯಲ್ಲ ಎಂದರು.
ಎಚ್ಡಿಕೆಗೆ ತಿರುಗೇಟು:
ಬಸವರಾಜ ಬೊಮ್ಮಾಯಿಗೆ ಗಂಡಸ್ತನ ಇಲ್ಲ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ರಘುಪತಿ ಭಟ್ ತಿರುಗೇಟು ನೀಡಿದರು. ಬೊಮ್ಮಾಯಿ ಅವರಿಗೆ ಗಂಡಸ್ತನ ಇದ್ದುದಕ್ಕೆ ಅಧಿಕಾರವನ್ನು ಮಾಡುತ್ತಿದ್ದಾರೆ. ಬೊಮ್ಮಾಯಿ ತನ್ನ ಗಂಡಸ್ತನವನ್ನು ಆಡಳಿತದಲ್ಲಿ ತೋರಿಸುತ್ತಿದ್ದಾರೆ ಎಂದರು.
ಬೊಮ್ಮಾಯಿ ಗಂಡಸ್ತನವನ್ನು ಅಭಿವೃದ್ಧಿ ವಿಚಾರದಲ್ಲಿ ತೋರಿಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಯಾವುದೇ ಒಂದು ಧರ್ಮದ ಪರವಾಗಿ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಮುಖ್ಯಮಂತ್ರಿಯಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತಿದ್ದಾರೆ. ಗಂಡಸ್ತನ ಇದ್ದದ್ದಕ್ಕೆ ಬೊಮ್ಮಾಯಿ ರಾಜ್ಯದಲ್ಲಿ ಸಮರ್ಥವಾಗಿ ಅಧಿಕಾರ ನಡೆಸುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಇದನ್ನೂ ಓದಿ: ಅಲ್ಲಾಹ್ನಿಗೆ ಅರ್ಪಿಸಿದ ಕೋಳಿ ಹಿಂದೂಗಳಿಗೆ ಯಾಕೆ?, ಮುಸ್ಲಿಮರು ವರ್ತನೆ ಸರಿಮಾಡಿಕೊಳ್ಳಬೇಕು: ರಘುಪತಿ ಭಟ್