ಉಡುಪಿ: ಮಾಜಿ ಪ್ರಧಾನಿ ದೇವೇಗೌಡರಿಗೆ (Devegowda) ನಾನೇ ಕೇಸರಿ ಶಾಲು ಹಾಕಿ ಸ್ವಾಗತಿಸುತ್ತೇನೆ ಎಂದು ಶಾಸಕ ಯಶ್ಪಾಲ್ ಸುವರ್ಣ (Yashpal Anand Suvarna) ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರು ಎನ್ಡಿಎ ಒಪ್ಪಿಕೊಂಡು ಮೈತ್ರಿಕೂಟದ ಜೊತೆಗಿದ್ದಾರೆ. ಕೇಸರಿ ಶಾಲು ಧರಿಸಲ್ಲ ಎಂಬುದು ಅವರ ವೈಯಕ್ತಿಕ ಹೇಳಿಕೆಯೋ ಅಥವಾ ಪಕ್ಷದ ನಿಲುವೋ ಗೊತ್ತಿಲ್ಲ. ಕುಮಾರಸ್ವಾಮಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಕೊಂಡಿದ್ದಾರೆ. ಮೋದಿ ಕಾರ್ಯಕ್ರಮದ ಗುಣಗಾನವನ್ನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ 28ಕ್ಕೆ 28 ಗೆಲ್ಲುವ ಪ್ರಯತ್ನವನ್ನು ಎನ್ಡಿಎ ಮಾಡುತ್ತಿದೆ. ದೇವೇಗೌಡರ ಈ ಹೇಳಿಕೆ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ದೇವೇಗೌಡರು ಉಡುಪಿಗೆ ಬಂದಾಗ ನಾನು ಶಾಸಕನಾಗಿ ಕೇಸರಿ ಶಾಲು ಹಾಕಿ ಸ್ವಾಗತ ಮಾಡುತ್ತೇನೆ ಎಂದು ಯಶ್ಪಾಲ್ ಹೇಳಿದ್ದಾರೆ. ಇದನ್ನೂ ಓದಿ: ಹಿಂದೆಯೇ ಅಡ್ವಾಣಿಗೆ ಭಾರತ ರತ್ನ ಕೊಡಬೇಕಿತ್ತು: ಸತೀಶ್ ಜಾರಕಿಹೊಳಿ
ಅಡ್ವಾಣಿಗೆ ಭಾರತ ರತ್ನ ಗೌರವ ಸಿಕ್ಕಿರುವ ಕುರಿತು ಮಾತನಾಡಿ, ಮಾಜಿ ಉಪ ಪ್ರಧಾನಿ, ರಾಷ್ಟ್ರದ ಹಿರಿಯ ನೇತಾರ ಎಲ್.ಕೆ.ಅಡ್ವಾಣಿಗೆ (Lal Krishna Advani) ಭಾರತ ರತ್ನ ಗೌರವ ಸಿಕ್ಕಿದೆ. ದೇಶಕ್ಕೆ ಅಡ್ವಾಣಿ ಅವರ ಕೊಡುಗೆ ಬಹಳಷ್ಟು ಇದೆ. ಸಂಸದರಾಗಿ, ಗೃಹ ಸಚಿವರಾಗಿ, ಉಪ ಪ್ರಧಾನಿಗಳಾಗಿ ಕೆಲಸ ಮಾಡಿದ್ದಾರೆ. ರಥಯಾತ್ರೆಯ ಮೂಲಕ ದೇಶಾದ್ಯಂತ ಜನರ ಮನ ಗೆದ್ದವರು. ರಾಮಮಂದಿರದ ಕನಸು ನನಸಾಗುವ ಸಂದರ್ಭದಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ಗೌರವ ಸಲ್ಲಿಕೆ ಆಗಿರುವುದು ನಮಗೆ ಬಹಳ ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ
ರಾಮಮಂದಿರದ ಹೋರಾಟದಲ್ಲಿ ಅಡ್ವಾಣಿ ಅವರ ಯೋಚನೆ ಮತ್ತು ಯೋಜನೆ ಬಹಳಷ್ಟು ಇತ್ತು. ರಾಮನ ಪ್ರಾಣ ಪ್ರತಿಷ್ಠೆ ಸಂದರ್ಭ ಈ ಘೋಷಣೆ ಆಗಿರುವುದು ಅಡ್ವಾಣಿ ಅವರ ಗೌರವ ಮತ್ತಷ್ಟು ಹೆಚ್ಚಿಸಿದೆ. ಪ್ರತಿಷ್ಠಾಪನೆ ಸಂದರ್ಭ ಅನಾರೋಗ್ಯದ ಪರಿಣಾಮ ಅವರು ಭಾಗವಹಿಸಿರಲಿಲ್ಲ. ಉಡುಪಿ ಜನತೆಯ ಪರವಾಗಿ ಅಡ್ವಾಣಿ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಥಯಾತ್ರೆಯ ಸಂದರ್ಭ ಡಾ.ವಿ.ಎಸ್.ಆಚಾರ್ಯ ಜೊತೆ ಬಹಳ ಒಡನಾಟ ಇದ್ದವರು. ದೇಶದ ಮತ್ತು ರಾಜ್ಯದ ಅಭಿವೃದ್ಧಿ ವಿಚಾರವಾಗಿ ಅಡ್ವಾಣಿ ಕಾಳಜಿ ತೋರಿದರು ಮತ್ತು ಸಲಹೆ ಸೂಚನೆಗಳನ್ನು ಕೊಟ್ಟವರು ಎಂದು ಅವರನ್ನು ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ವೋಟ್ ಹಾಕಿಲ್ಲ ಅಂತ ಯಾರನ್ನಾದ್ರು ಓಡಿಸ್ಕೊಂಡು ಹೋಗ್ತಾ ಇದೀವಾ: ಹೆಚ್.ಸಿ.ಬಾಲಕೃಷ್ಣ
ಸಿಎಂ ಸಿದ್ದರಾಮಯ್ಯ ಕುಂಕುಮ ನಿರಾಕರಿಸಿದ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಭ್ರಷ್ಟಾಚಾರ ದೇಶ ವಿರೋಧಿ ಮತ್ತು ಹಿಂದೂ ವಿರೋಧಿ ನೀತಿ ಮುಂದುವರೆಸಿದ್ದಾರೆ. ಕಾಂಗ್ರೆಸ್ ಸಂಸದ ಪ್ರತ್ಯೇಕ ರಾಷ್ಟçದ ಕೂಗು ಎಬ್ಬಿಸಿದ್ದಾರೆ. ಕುಂಕುಮ ಕೊಡಲು ಬಂದಾಗ ಸಿದ್ದರಾಮಯ್ಯ ಅದನ್ನು ತಡೆದಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿದ್ದಾರಾ? ಪಾಕಿಸ್ತಾನದಲ್ಲಿ ಇದ್ದಾರಾ? ಎಂಬ ಸಂಶಯವಿದೆ. ಅಲ್ಪಸಂಖ್ಯಾತ ಮುಸ್ಲಿಮರ ಓಲೈಕೆಗಾಗಿ ಹೀಗೆ ಮಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ನಿವೃತ್ತಿ ಜೀವನವನ್ನು ಬಾಂಗ್ಲಾದೇಶ ಅಥವಾ ಪಾಕಿಸ್ತಾನದಲ್ಲಿ ಕಳೆಯುವ ಯೋಚನೆ ಮಾಡಿರಬಹುದು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಣ್ಣ-ತಂಗಿ ವರಸೆಯ ಪ್ರೀತಿಗೆ ಪೋಷಕರ ನಿರಾಕರಣೆ; ಪ್ರೇಮಿಗಳಿಬ್ಬರು ನೇಣಿಗೆ ಶರಣು